ADVERTISEMENT

ಭರದಿಂದ ಸಾಗಿದ ಕಾಂಕ್ರೀಟ್ ರಸ್ತೆ ಕಾಮಗಾರಿ: ನಾಗರಿಕರ ಹರ್ಷ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 8:43 IST
Last Updated 26 ನವೆಂಬರ್ 2017, 8:43 IST

ಮಲೇಬೆನ್ನೂರು: ಪಟ್ಟಣದ ಪಶ್ಚಿಮ ಭಾಗದ ಸಂತೆ ಮೈದಾನ, ಇಂದಿರಾನಗರ, ಬಸವೇಶ್ವರ ಬಡಾವಣೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಕಾಮಗಾರಿ ಭರದಿಂದ ಮುನ್ನೆಡೆದಿದ್ದು ಶನಿವಾರ ನಾಗರಿಕರು ಹರ್ಷ ವ್ಯಕ್ತಪಡಿಸಿದರು.

ಎಪಿಎಂಸಿ ಆರ್‌ಡಿಎಎಫ್ 21 ಯೋಜನೆಯಡಿ ₹ 181 ಲಕ್ಷದಲ್ಲಿ ರೂಪಿತವಾಗಿತ್ತು. ಒಂದು ವಾರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಎಪಿಎಂಸಿ ನಿರ್ದೇಶಕ ಪಟೇಲ್ ಮಂಜುನಾಥ್ ಮಾಹಿತಿ ನೀಡಿದರು.

ಈಗಾಗಲೆ ಪೊಲೀಸ್ ಠಾಣೆ ರಸ್ತೆ ಕಾಂಕ್ರೀಟ್ ಹಾಕುವ ಕೆಲಸ ಮುಕ್ತಾಯವಾಗಿ ಕ್ಯೂರಿಂಗ್ ಮಾಡುತ್ತಿದ್ದಾರೆ. ಬಡಾವಣೆ ನಾಗರಿಕರು, ಅಂಗಡಿ ಮಾಲೀಕರು, ಪುರಸಭೆ ಸದಸ್ಯರು, ಎಪಿಎಂಸಿ ಅನುದಾನದ ಕೆಲಸಕ್ಕೆ ಸಹಕಾರ ನೀಡಿದ ಕಾರಣ ಕಾಮಗಾರಿ ತ್ವರಿತವಾಗಿ ಸಾಗಿದೆ.

ADVERTISEMENT

ಈಗಾಗಲೆ ಎಪಿಎಂಸಿ ಅನುದಾನದಡಿ ನಿರ್ಮಿಸಿದ ಗ್ರಾಮೀಣ ಸಂತೆ, ಕಾಂಕ್ರೀಟ್ ರಸ್ತೆ ಹಾಳಾಗದಂತೆ ಅನುಪಾಲನೆ ಮಾಡಿ ಕಾಪಾಡಿಕೊಳ್ಳುವುದು ಪುರಸಭೆ ಜವಾಬ್ದಾರಿ ಎಂದರು.

ಕಾಮಗಾರಿಗೆ ಕಟ್ಟುನಿಟ್ಟಿನ ಗುಣಮಟ್ಟದ ಯಾಂತ್ರೀಕೃತ ಆರ್‌ಎಂಸಿ ಕಾಂಕ್ರೀಟ್, ತಟ್ಟಣೆ ಯಂತ್ರ ಬಳಸಲಾಗುತ್ತಿದೆ ಎಂದು ಭೂಸೇನಾ ನಿಗಮದ ಎಂಜಿನಿಯರ್ ಪ್ರಭಾಕರ್, ಕಿರಣ್, ಗುಣನಿಯಂತ್ರಣ ಎಂಜಿನಿಯರ್ ಅನಿಲ್ ತೃಪ್ತಿ ವ್ಯಕ್ತಪಡಿಸಿದರು.

ರಸ್ತೆ ಕಾಮಗಾರಿ ಮುಗಿದ ನಂತರ ಪುರಸಭೆ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಲು ವಿಶೇಷ ಅನುದಾನ ನೀಡಬೇಕು ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶಬ್ಬೀರ್ ಆಗ್ರಹಿಸಿದರು. ಒಟ್ಟಾರೆ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿ ಈಗ ಭರದಿಂದ ಸಾಗಿ ಮುಕ್ತಾಯ ಹಂತ ತಲುಪಿದ್ದು, ನಾಗರಿಕರ ಮನದಲ್ಲಿ ನೆಮ್ಮದಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.