ADVERTISEMENT

ಮನೆ ಮುಂದೆ ಗದ್ದಲ: ಶಾಂತನಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 17 ಮೇ 2018, 4:57 IST
Last Updated 17 ಮೇ 2018, 4:57 IST

ಹೊನ್ನಾಳಿ : ’.ರೇಣುಕಾಚಾರ್ಯ ಅವರ  ಬೆಂಬಲಿಗರು ಗೊಲ್ಲರಹಳ್ಳಿಯಲ್ಲಿನ ನಮ್ಮ ಮನೆ ಮುಂಭಾಗದ ರಸ್ತೆಯಲ್ಲಿ ನೂರಾರು ಬೈಕ್‌ ಗಳೊಂದಿಗೆ ಓಡಾಡಿ, ಒಂದು ಗಂಟೆ ಕಾಲ ಕರ್ಕಶ ಶಬ್ಧ ಮಾಡಿ ಕೇಕೆ ಹಾಕಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಡಿ.ಜಿ. ಶಾಂತನಗೌಡ ಆರೋಪಿಸಿದರು.

ತಾಲ್ಲೂಕಿನ ಮತದಾರರಿಗೆ ಹಾಗೂ ಪಕ್ಷದ ಮುಖಂಡರಿಗೆ ಕೃತಜ್ಞತೆ ಹೇಳಲು ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನನ್ನ ಮನೆ ಮುಂದಷ್ಟೇ ಅಲ್ಲ ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರ ಮನೆ ಮುಂದೆಯೂ  ಪಟಾಕಿ ಸಿಡಿಸಿ, ಘೋಷಣೆ ಕೂಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರ ಮನೆ ಹಾಗೂ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಪಟಾಕಿ ಸಿಡಿಸಿ ರಂಪಾಟ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ಗೋವಾದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಹೇಗೆ ಅಲ್ಲಿ ಬಿಜೆಪಿ ನಾಟಕವಾಡಿ ಅಧಿಕಾರಕ್ಕೆ ಬಂದಿದೆಯೋ  ಅದೇ ಮಾದರಿಯಲ್ಲಿ ನಾವೂ ಜೆಡಿಎಸ್ ನೊಂದಿಗೆ ಸರ್ಕಾರ ರಚಿಸುತ್ತೇವೆ’ ಎಂದು ಹೇಳಿದರು.

ಕೋಮು ಗಲಭೆಗೆ ಯತ್ನ : ನಮ್ಮ ಮನೆ ಸಮೀಪದ ಮಸೀದಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಕೋಮು ಗಲಭೆಗೆ ರೇಣುಕಾಚಾರ್ಯ ಬೆಂಬಲಿಗರು ಪಯತ್ನ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ. ಸಿದ್ದಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮುಖಂಡರಾದ ಎಚ್.ಎ. ಉಮಾಪತಿ, ಡಾ. ಈಶ್ವರನಾಯ್ಕ, ಸಣ್ಣಕ್ಕಿ ಬಸವನಗೌಡ, ಗದ್ದಿಗೇಶ್, ಎಂ. ರಮೇಶ್, ಎಂ. ಸಿದ್ದಪ್ಪ, ವರದರಾಜಪ್ಪ, ಡಿ.ಜಿ. ವಿಶ್ವನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.