ADVERTISEMENT

`ರಕ್ತದಾನ ಪವಿತ್ರ ಸಾಮಾಜಿಕ ಸೇವೆ

ಚಿಗಟೇರಿ ಆಸ್ಪತ್ರೆ ಆವರಣ: ಬ್ಲಡ್ ಮೊಬೈಲ್ ಬಸ್‌ನಲ್ಲಿ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 9:00 IST
Last Updated 7 ಜೂನ್ 2013, 9:00 IST

ದಾವಣಗೆರೆ:  ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ರಕ್ತದಾನದ ಕುರಿತು ಅರಿವು ಮೂಡಿಸಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ.ಹೇಮಚಂದ್ರ ಹೇಳಿದರು.

ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ `ಬ್ಲಡ್ ಮೊಬೈಲ್ ಬಸ್'ನಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.

ರಕ್ತದಾನ ಪವಿತ್ರವಾದ ಸಾಮಾಜಿಕ ಸೇವೆ. ರಕ್ತವು ದಾನ ಮಾಡಿದಷ್ಟು ಹೆಚ್ಚುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಬ್ಲಡ್ ಮೊಬೈಲ್ ಬಸ್ ಮೂಲಕ 200 ಯೂನಿಟ್ ರಕ್ತ ಸಂಗ್ರಹಿಸುವ ಗುರಿಯಿದೆ. ಆದರೆ, ಇದು ಗುರಿಮೀರಿ ಸಂಗ್ರಹವಾಗಲಿ ಎಂದು ಆಶಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೀಲಾ ಗದಿಗೇಶ್ ಮಾತನಾಡಿ, ರಕ್ತದಾನಿಗಳು ತಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಉತ್ತಮ ಆಹಾರ ಸೇವನೆಯಿಂದ ರಕ್ತ ವೃದ್ಧಿ ಆಗುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್.ಸುಮಿತ್ರಾ ದೇವಿ, ಜಿಲ್ಲಾ ಏಡ್ಸ್ ಪ್ರತಿಬಂಧಕಾಧಿಕಾರಿ ಡಾ.ಎ.ಎಂ.ಸುನಂದಾ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ನಾಗರಾಜ್, ಸಿ.ಜಿ.ಆಸ್ಪತ್ರೆ ಅಧೀಕ್ಷಕ ಡಾ.ಟಿ.ಪರಶುರಾಮಪ್ಪ ಇದ್ದರು. ರಕ್ತದಾನಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ನಗರದ ಹೈಸ್ಕೂಲ್ ಮೈದಾನದಿಂದ ಚಿಗಟೇರಿ ಆಸ್ಪತ್ರೆವರೆಗೆ ಜಾಥಾ ನಡೆಯಿತು.

ಬ್ಲಡ್‌ಮೊಬೈಲ್ ಬಸ್:
ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತ ಸಂಗ್ರಹಣ ಘಟಕ ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ಬಸ್ ಇದು. ಇದರಲ್ಲಿ ಏಕಕಾಲಕ್ಕೆ ನಾಲ್ವರು ರಕ್ತದಾನ ಮಾಡುವ ವ್ಯವಸ್ಥೆಯಿದೆ. ರಕ್ತ ಸಂಗ್ರಹ, ಶೀತಲೀಕರಣ ಘಟಕ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆ ಹೊಂದಿದೆ. ಜೂನ್ 7ರಂದು ಹರಿಹರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬ್ಲಡ್ ಮೊಬೈಲ್ ಬಸ್‌ನಲ್ಲಿ ರಕ್ತ ಸಂಗ್ರಹ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT