ADVERTISEMENT

ವಲಸಿಗ ರಾಜಕಾರಣ ಇತಿಶ್ರೀಗೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:02 IST
Last Updated 13 ಏಪ್ರಿಲ್ 2013, 5:02 IST

ಹರಪನಹಳ್ಳಿ:  ಕ್ಷೇತ್ರದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ `ವಲಸಿಗ ರಾಜಕಾರಣ'ದ ಪರಂಪರೆಗೆ ಇತಿಶ್ರೀ ಹಾಡುವ ಹಿನ್ನೆಲೆಯಲ್ಲಿ ಇಲ್ಲಿನ `ಸಮಸ್ತರು' ಸಾಂಸ್ಕೃತಿಕ ಸಂಘಟನೆ ಮತದಾರರ ಪರಿವರ್ತನೆಗೆ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.

ಜಾತ್ಯತೀತ, ಪಕ್ಷಾತೀತ ತತ್ವಗಳನ್ನು ಅಳವಡಿಸಿಕೊಂಡಿರುವ ಸಮಸ್ತರು ಸಂಘಟನೆ, ಮೌಲ್ಯಧಾರಿತ ಪ್ರಜಾಪ್ರಭುತ್ವದ ಉಳುವಿಗಾಗಿ ಕರಪತ್ರ ಚಳವಳಿಯ ಮೂಲಕ ಕ್ಷೇತ್ರಾದ್ಯಂತ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದು ಸಂಘಟನೆ ಸಂಚಾಲಕರಾದ ಬಿ. ಪರಶುರಾಮ್ ಹಾಗೂ ಪಿ. ಅಂಜಿನಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭ್ರಷ್ಟಾಚಾರದ ಮೂಲಕ ಹಗಲು ದರೋಡೆ ನಡೆಸಿ, ಗಳಿಕೆ ಮಾಡಿದ ಹಣದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ, ಸಾವಿರಾರು ರೂಪಾಯಿ ಕೊಟ್ಟು ಮತದಾರರನ್ನು ಖರೀದಿಸುವಂತ ಕೆಟ್ಟ ಪರಂಪರೆ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸಮಾಧಿ ಮಾಡಿದೆ. ಜನರ ದುಃಖ- ದುಮ್ಮಾನಗಳ ಅರಿವಿರದ ಕ್ಷೇತ್ರದ ಹೊರಗಿನ ಅಭ್ಯರ್ಥಿಗಳು ಸ್ಪರ್ಧಿಗೆ ಇಳಿಯುತ್ತಿದ್ದಾರೆ. ಇಂತಹ ಅಭ್ಯರ್ಥಿಗಳನ್ನು ನಮ್ಮ ನಾಯಕರು ಎಂದು ನಾವು ಒಪ್ಪಲು ಸಾಧ್ಯವಿಲ್ಲ.

ಹೀಗಾಗಿ, ಕ್ಷೇತ್ರದ ಚುನಾವಣೆಯಲ್ಲಿ ತಾಲ್ಲೂಕಿನ ಅಭ್ಯರ್ಥಿಯೇ ಶಾಸಕರಾಗಿ ಆಯ್ಕೆಯಾಗಲಿ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ, ಸಮರ್ಥ ಅಭ್ಯರ್ಥಿ ಯಾರು ಎಂದು ತೀರ್ಮಾನಿಸಿ ಮತ ಚಲಾಯಿಸಿ. ಮತ ಖರೀದಿಗೆ ಬರುವ ಅಭ್ಯರ್ಥಿಗಳಿಗೆ ಛೀಮಾರಿ ಹಾಕಿ ಎಂಬಂಥ ಘೋಷಣೆಗಳು ಕರಪತ್ರ ಚಳವಳಿಯ ಪ್ರಮುಖ ಉದ್ದೇಶ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಮತದಾರರ ಪರಿವರ್ತನೆಗಾಗಿ ಮುದ್ರಿಸಿರುವ ಕರಪತ್ರವನ್ನು ಪಟ್ಟಣದ ಯುವ ಮತದಾರ ಎಚ್.ಪಿ. ಲಿಂಗನಗೌಡ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.