ಹರಿಹರ: ನಿಯತ್ತಿಗೆ ಅನ್ವರ್ಥಕ ಪ್ರಾಣಿ ನಾಯಿ ಎಂಬ ನಾಣ್ಣುಡಿ ನಗರದ ದಾಳಿಕೋರ ಬೀದಿನಾಯಿಗಳಿಂದ ಹುಸಿಯಾಗುತ್ತಿರುವುದು ವಿಪರ್ಯಾಸ ಎಂದು ಶಾಸಕ ಬಿ.ಪಿ. ಹರೀಶ್ ವಿಷಾದಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಹರಿಹರ ಕೆನೆಲ್ ಅಸೋಸಿಯೇಷನ್ ವತಿಯಿಂದ ಭಾನುವಾರ ನಡೆದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಉರಗ ತಜ್ಞ ಹೊಸಪೇಟೆಯ ವೇಣುಗೋಪಾಲ ನಾಯ್ಡು ಮಾತನಾಡಿ, ಎರಡು ತಲೆ ಹಾವುಗಳಿಂದ ಸಂಪತ್ತು ಸಿಗುತ್ತದೆ ಎಂಬುದು ಮೂಢನಂಬಿಕೆ. ಮೂಢನಂಬಿಕೆಯಿಂದ ಮೋಸಕ್ಕೆ ಒಳಗಾಗಬೇಡಿರಿ. ಹುತ್ತಕ್ಕೆ ಹಾಲು ಎರೆಯುವುದರಿಂದ ಅದಕ್ಕೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು. ಹಾವುಗಳು ಪರಿಸರದ ಸಮತೋಲನ ಕಾಪಾಡುತ್ತವೆ. ಕೆಲವು ಹಾವುಗಳು ಹೊಲಗಳಲ್ಲಿರುವ ಇಲಿ, ಹೆಗ್ಗಣಗಳನ್ನು ತಿಂದು ರೈತರ ಬೆಳೆಯನ್ನು ರಕ್ಷಿಸುತ್ತವೆ ಎಂದು ಮಾಹಿತಿ ನೀಡಿದರು.
ಎರಿಕ್ಸ್ ಜಾನಿ, ಪೈಥಾನ್ ಮಾಲಿರೈಸ್, ಕೆರೆಗೊಡ್ಡ, ಊರುಮಂಡಲ, ಹಸಿರು ಹಾವು, ಮಣ್ಣುಮುಕ್ಕ, ನಾಗರ ಮೊದಲಾದ 35 ಜಾತಿಯ ಉರಗಗಳನ್ನು ಪ್ರದರ್ಶಿಸಿದರು.
ಬ್ರಿಟಿಷ್ ಬುಲ್ಡಾಗ್, ಗೋಲ್ಡನ್ ರಿಟ್ರೀವರ್, ನಿಯೊ ಪಾಲಿಟನ್ ಮ್ಯಾಸ್ಟಿಫ್, ಜರ್ಮನ್ ಶಫರ್ಡ್, ಪಾಮೋರಿನ್, ಪಗ್, ಸೇಂಟ್ ಬರ್ನಾಡ್, ಡ್ಯಾಶ್ ಹೌಂಡ್, ಮುದೋಳ್, ಡಾಬರ್ಮನ್, ಲ್ಯಾಬ್ರೆಡಾರ್, ಗ್ರೇಟ್ಡೇನ್ ಮೊದಲಾದ ತಳಿಯ ಸುಮಾರು 100ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಡಾ.ವೀರೇಶ್, ದೀಪಕ್ ಮೊದಲಿಯಾರ್, ಡಾ.ಪಿ.ಎಸ್. ಹೆಗ್ಡೆ, ಡಾ.ನಾಗರಾಜ್, ಶರ್ವಾಣಿ ಸ್ಟ್ಯಾನ್ಲಿ, ಡಾ. ಬಸವರಾಜ್, ಸ್ಟೀವ್ ಅಲ್ಮೇಡಾ ತೀರ್ಪುಗಾರರಾಗಿ ಭಾಗವಹಿದ್ದರು.
ಜಿ.ಪಂ. ಸದಸ್ಯ ವೀರಭದ್ರಪ್ಪ, ಅಸೋಸಿಯೇಷನ್ ಅಧ್ಯಕ್ಷ ಡಾ.ಆರ್.ಎಚ್. ರಮೇಶ್, ಸತೀಶ್ ನಾಯ್ಕ, ವಿನಯ ತೇಲ್ಕರ್, ಸಂತೋಷ್ ಕುಂಚೂರ್, ರವಿ ಶಾವಿಗೆ, ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.