ADVERTISEMENT

ವ್ಯಕ್ತಿತ್ವ ವಿಕಸನ ಕಾರ್ಯದಲ್ಲಿ ರಾಷ್ಟ್ರ ಸೇವಿಕಾ ಸಮಿತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:25 IST
Last Updated 7 ಜನವರಿ 2012, 10:25 IST

ದಾವಣಗೆರೆ: ಮಹಿಳೆಯರನ್ನು ಶಾರೀರಿಕ, ಮಾನಸಿಕ, ಬೌದ್ಧಿಕವಾಗಿ ಸಶಕ್ತಗೊಳಿಸುವ ಉದ್ದೇಶದ `ರಾಷ್ಟ್ರ ಸೇವಿಕಾ ಸಮಿತಿ~ಯು ತನ್ನ ಚಟುವಟಿಕೆಗಳ ಮೂಲಕ ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಸಮಿತಿಯ ಅಖಿಲ ಭಾರತ ಸಹಕಾರ್ಯವಾಹಿಕ ಅಲಕಾ ಇನಾಮದಾರ ಹೇಳಿದರು.

ಸಂಘಟನೆಯು 1936ರಲ್ಲಿ ಮಹಾರಾಷ್ಟ್ರದ ವಾರ್ದಾದಲ್ಲಿ ಸ್ಥಾಪನೆಯಾಗಿ ಪ್ರಸ್ತುತ ಭಾರತದಲ್ಲಿ ಮಾತ್ರವಲ್ಲದೇ 18 ಹೊರ ದೇಶಗಳಲ್ಲೂ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರ ವ್ಯಕ್ತಿತ್ವ ವಿಕಸನ ಮತ್ತು ಚಾರಿತ್ರ್ಯ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘಟನೆಯು ದೇಶದಲ್ಲಿ 850ಕ್ಕೂ ಹೆಚ್ಚು ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆ. ಬಾಲಕಿಯರ ಹಾಸ್ಟೆಲ್‌ಗಳು, ಉದ್ಯೋಗ ಕೇಂದ್ರಗಳು, ವೈದ್ಯಕೀಯ ಸೇವಾ ಸೌಲಭ್ಯಗಳು, ಉಚಿತ ವಿದ್ಯಾಮಂದಿರಗಳ ಮೂಲಕ ಸೇವೆ ಮಾಡುವುದಲ್ಲದೇ, ಭೂಕಂಪ, ಪ್ರವಾಹ, ಸುನಾಮಿ ಮುಂತಾದ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸ್ಪಂದಿಸುವ ಕೆಲಸವನ್ನೂ ಮಾಡುತ್ತ ಬಂದಿದೆ ಎಂದು ವಿವರಿಸಿದರು.

ಮುಖ್ಯವಾಗಿ ಮಹಿಳೆಯರನ್ನು ಮಾನಸಿಕ, ಬೌದ್ಧಿಕವಾಗಿ ಸಕ್ಷಮಗೊಳಿಸುವ ಕೆಲಸದಲ್ಲಿ ಸಂಘಟನೆ ತೊಡಗಿಕೊಂಡಿದೆ. ಬೆಂಗಳೂರಿನಲ್ಲಿ ಶಾರದಾ ಶಾಲೆಯನ್ನು ನಡೆಸ ಲಾಗುತ್ತಿದೆ. ಮಂಗಳೂರು ಮುಂತಾದ ಕಡೆಗಳಲ್ಲೂ ಚಟುವಟಿಕೆಗಳು ನಡೆಯುತ್ತಿವೆ. ದಾವಣಗೆರೆ ಜಿಲ್ಲೆಯಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ, ಹೆಚ್ಚು ಚಟುವಟಿಕೆಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ನಗರದ ಅಭಿನವ ರೇಣುಕಾ ಮಂದಿರದಲ್ಲಿ ಕಾಲೇಜು ಯುವತಿಯರಿಗಾಗಿ ಡಿ. 30ರಿಂದ 7 ದಿನಗಳ ತರುಣಿ ಶಿಬಿರ ನಡೆಯುತ್ತಿದ್ದು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಸಮಿತಿಯ ಮುಖಂಡರಾದ ಅರುಣಾ, ವೇದಾ ಕುಲಕರ್ಣಿ, ಗೀತಾ, ಶೋಭಾ, ಅಂಬಿಕಾ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.