ADVERTISEMENT

`ಹಸಿರೆಲೆ ಗೊಬ್ಬರ ಬಳಸಿ'

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 10:25 IST
Last Updated 19 ಜುಲೈ 2013, 10:25 IST

ದಾವಣಗೆರೆ:  `ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಹಸಿರೆಲೆ ಗೊಬ್ಬರವನ್ನು ಹೆಚ್ಚು ಬಳಸಿದರೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಹಾಗೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ' ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಆರ್.ಜಿ.ಗೊಲ್ಲರ್ ಹೇಳಿದರು.

ಹಳೇ ಕೊಳೇನಹಳ್ಳಿ ಗ್ರಾಮದಲ್ಲಿ ಗುರುವಾರ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ `ಡಯಂಚ' ಹಸಿರೆಲೆ ಗೊಬ್ಬರ ಬಳಕೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ಜಮೀನು ಇದ್ದಷ್ಟೇ ಇರುತ್ತದೆ. ಆದ್ದರಿಂದ ಇರುವ ಭೂಮಿಯಲ್ಲೇ ಅಧಿಕ ಇಳುವರಿ ಪಡೆಯಲು ಡಯಂಚ ದಂತಹ ಗಿಡಗಳನ್ನು ಬೆಳೆಸಿ, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು. ಈ ಗಿಡಗಳು ಭೂಮಿಗೆ ಸಾರಜನಕ ಪೂರೈಕೆ ಮಾಡುತ್ತವೆ ಎಂದು ತಿಳಿಸಿದರು.

ಗ್ರಾಮದಲ್ಲಿ ಮೊದಲ ಬಾರಿ ಹೊಲಗಳಲ್ಲಿ ಡಯಂಚ ಗಿಡಗಳನ್ನು ಬೆಳೆಸಿದ ರೈತರಾದ ಕೆ.ಸಿದ್ದಪ್ಪ ಹದಡಿ ಹಾಗೂ ಕೆ.ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಧಾ ವೀರೇಂದ್ರ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಮ್ಮ, ಮುಖಂಡ ವೀರೇಂದ್ರ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ನರಸಿಂಹ ಮೂರ್ತಿ, ನಿವೃತ್ತ ಸಹಾಯಕ ನಿರ್ದೇಶಕ ಎಸ್.ಬಿ.ರಾಜಶೇಖರ್, ಸ್ವಪ್ನಾ, ಶಿಲ್ಪಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.