ADVERTISEMENT

‘ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:30 IST
Last Updated 20 ಸೆಪ್ಟೆಂಬರ್ 2013, 8:30 IST

ಹೊನ್ನಾಳಿ: ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿ ಸಮಿತಿಯ ಕಾರ್ಯಾಧ್ಯಕ್ಷ ಎಂ.ದೊಡ್ಡಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2013–14ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್‌, ಯುವ ರೆಡ್‌ ಕ್ರಾಸ್‌ ಹಾಗೂ ಸ್ಕೌಟ್ಸ್‌–ಗೈಡ್ಸ್‌ ಚಟುವಟಿಕೆಗಳ ಚಾಲನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸದೃಢ ಶರೀರಕ್ಕೆ ಕ್ರೀಡೆಗಳು ಸಹಕಾರಿ. ಸಾಂಸ್ಕೃತಿಕ ಚಟುವಟಿಕೆಗಳಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ರಾಷ್ಟ್ರೀಯ ಸೇವಾ ಯೋಜನೆ ಯುವಜನರಲ್ಲಿ ಸೇವಾ ಮನೋಭಾವನೆ ಬೆಳೆಸುತ್ತದೆ ಎಂದು ವಿವರಿಸಿದರು.

ಶಾಯಿರಿ ಕವಿ ಪ್ರೊ.ಇಟಗಿ ಈರಣ್ಣ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಒಬ್ಬರಿಗೆ ಒಳ್ಳೆಯದು ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ, ಇನ್ನೊಬ್ಬರಿಗೆ ಕೆಡುಕು ಬಯಸಬಾರದು. ಜೀವನ ಪ್ರೀತಿ ಬೆಳೆಸಿಕೊಳ್ಳಬೇಕು. ಯಾವುದೇ ವಿಷಯದಲ್ಲಿ ಸೋಲುಂಟಾದಾಗ ಬದುಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಬದುಕನ್ನು ಧೈರ್ಯದಿಂದ ಎದುರಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ಬಿ.ಜಿ.ಚನ್ನಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ರಾಜ್‌ಕುಮಾರ್‌ ಪ್ರಾಸ್ತಾವಿಕ ಮಾತನಾಡಿ, ಮನುಷ್ಯ ಆಕಾಶದಲ್ಲಿ ಹಾರುವುದನ್ನು, ನೀರಲ್ಲಿ ಈಜುವುದನ್ನು ಕಲಿತ. ಆದರೆ, ಮುಖ್ಯವಾಗಿ ಮನುಷ್ಯನಾಗಿ ಬಾಳುವುದನ್ನು ಇಂದು ಮರೆತಿದ್ದಾನೆ. ಮಾನವೀಯತೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆಯಿತ್ತರು.

ವಿವಿಧ ಪರೀಕ್ಷೆಗಳಲ್ಲಿ ಗಣನೀಯ ಸಾಧನೆಗೈದ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ರಚಿಸಿದ ‘ಗೋಡೆ ಬರಹ ಪತ್ರಿಕೆ’ಗಳನ್ನು ಇದೇ  ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಹಳದಪ್ಪ, ಎಚ್‌.ಎಂ.ಶಿವಮೂರ್ತಿ, ಸತ್ತಿಗೆ ರಾಜಪ್ಪ, ರೇಣುಕಾಬಾಯಿ, ಮಲ್ಲೇಶ್‌, ಮಂಜೇಶ್‌, ಪ್ರ.ಡಿ.ಸಿ. ಪಾಟೀಲ್‌, ಪ್ರೊ.ಎಂ.ಎನ್‌.ರಮೇಶ್‌, ಪ್ರೊ.ಎಂ.ಡಿ.ರಾಘವೇಂದ್ರ, ಡಾ.ವಿದ್ಯಾ ಟಿ.ಪವಾರ್‌ ಇದ್ದರು.

ಎಚ್‌.ಕಲಾವತಿ ಪ್ರಾರ್ಥಿಸಿದರು. ವಿಕ್ಟೋರಿಯಾ ಮೇರಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಪ್ರೊ.ಎಚ್‌.ಪಾಂಡುರಂಗ ಸ್ವಾಗತಿಸಿದರು. ಪ್ರೊ.ಪಿ.ಎಸ್‌.ಹರೀಶ್‌ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಅರಸಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.