ಹರಪನಹಳ್ಳಿ: ಮಳೆಯಿಂದಾಗಿ ಹಾನಿಯಾಗಿರುವ 295 ಹೆಕ್ಟರ್ ಬೆಳೆ ಹಾನಿಯಾಗಿದ್ದು, ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ವಿತರಣೆಗೆ ಜರೂರು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ತಿಳಿಸಿದರು.
ಬುಧವಾರ ತಾಲ್ಲೂಕಿನ ತುಂಗಭದ್ರಾ ನದಿತೀರದ ನಂದ್ಯಾಲ, ವಟ್ಲಹಳ್ಳಿ, ಕಡತಿ, ನಿಟ್ಟೂರು, ತಾವರಗುಂದಿ, ನಿಟ್ಟೂರು ಬಸಾಪುರ, ಗರ್ಭಗುಡಿ, ಹಲುವಾಗಲು ಗ್ರಾಮಗಳಲ್ಲಿ ಬೆಳೆ ಹಾನಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೆಕ್ಕೆಜೋಳ 26 ಹೆಕ್ಟೇರ್, ರಾಗಿ – 89.6 ಹೆಕ್ಟೇರ್, ಭತ್ತ -179 ಹೆಕ್ಟೇರ್ ಹಾನಿ ಅಂದಾಜಿಸಲಾಗಿದೆ. ನದಿ ತೀರದಲ್ಲಿ 3,500 ಚೀಲ ಭತ್ತ ನದಿಪಾಲಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಇದರ ಬಗ್ಗೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸುತ್ತಿದ್ದಾರೆ, 60 ಹೆಕ್ಟರ್ ಈರುಳ್ಳಿ ಬೆಳೆಯು ಹಾನಿಯಾಗಿದೆ, ಪಪ್ಪಾಯಿ, ರಾಗಿ, ಬೆಳೆ, ಭತ್ತದ ಬೆಳೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ರಾಶಿ ಮಾಡಿದ್ದ ಮೆಕ್ಕೆಜೋಳ ತೆನೆಗಳು ಫಲ ಬಂದಿದ್ದು ರೈತರಿಗೆ ತೊಂದರೆ ಆಗಿದೆ. ಹಾನಿ ಪ್ರದೇಶಗಳನ್ನೆಲ್ಲಾ ವೀಕ್ಷಿಸಿದ್ದು ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ತಾಲ್ಲೂಕಿನ ವಿವಿಧೆಡೆ 90 ಮನೆಗಳಿಗೆ ಹಾನಿಯಾಗಿದೆ, ಭಾಗಶಃ ಮತ್ತು ಸಂಪೂರ್ಣ ಮನೆಗಳು ಹಾನಿಯಾಗಿರುವುದನ್ನು ಪಟ್ಟಿ ಮಾಡಿ ತಕ್ಷಣ ಪರಿಹಾರ ನೀಡುವಂತೆ ತಹಶೀಲ್ದಾರ್ ಎಲ್.ಎಂ. ನಂದೀಶ್ ಅವರಿಗೆ ಆದೇಶಿಸಿದರು.
ಸಹಾಯಕ ನಿರ್ದೇಶಕರಾದ ಗೊಂದಿ ಮಂಜುನಾಥ್, ಜಯಸಿಂಹ, ಯು.ಪಿ.ನಾಗರಾಜ್, ಎಂ.ಪಿ. ನಾಯ್ಕ, ರಾಘವೇಂದ್ರ ಶೆಟ್ಟಿ, ಲೋಕೇಶ್, ಸಣ್ಣಹಾಲಪ್ಪ, ಸಂತೋಷ್, ಮಲ್ಲೇಶ್, ತಿಮ್ಮಪ್ಪ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.