ಹರಿಹರ: ತಾಲ್ಲೂಕಿನ ಕುರುಬರಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ಗಾಳಿ ತುಂಬುವಾಗ ಟೈರ್ ಸ್ಫೋಟಗೊಂಡು ತೀವ್ರ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ನಿಟ್ಟೂರು ಗ್ರಾಮದ ವಾಸಿ, ದುಗ್ಗಾವತಿ ಸಕ್ಕರೆ ಕಾರ್ಖಾನೆಯಲ್ಲಿ ಜೆಸಿಬಿ ಆಪರೇಟರ್ ಸಹಾಯಕ ಮಾರುತಿ (28) ಮೃತಪಟ್ಟವರು.
ಕಾರ್ಖಾನೆಗೆ ಭಾನುವಾರ ಕೆಲಸಕ್ಕೆ ಹೋಗಿದ್ದ ಮಾರುತಿ ಅವರು ಕುಬೇರ ಎಂಬುವರೊಂದಿಗೆ ಮಧ್ಯಾಹ್ನ 1.30ಕ್ಕೆ ಜೆಸಿಬಿ ಮತ್ತು ಅಗ್ನಿಶಾಮಕ ವಾಹನದ 3 ಟೈರ್ಗಳ ಪಂಚರ್ ಹಾಕಿಸಲು ಟ್ರ್ಯಾಕ್ಟರ್ನಲ್ಲಿ ಹರಿಹರ ತಾಲ್ಲೂಕಿನ ಕುರುಬರಹಳ್ಳಿಯ ಪಂಚರ್ ಅಂಗಡಿಗೆ ಬಂದಿದ್ದಾರೆ.
ಪಂಚರ್ ಅಂಗಡಿಯ ಸಂದೀಪ್ ಒಂದು ಟೈರ್ಗೆ ಪಂಚರ್ ಹಾಕಿದ ನಂತರ ಇನ್ನೊಂದು ಟೈರ್ಗೆ ಪಂಚರ್ ಹಾಕುತ್ತಿದ್ದರು. ಆಗ ಪಂಚರ್ ಹಾಕಿದ ಟೈರ್ ಅನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿಟ್ಟು ಮಾರುತಿ ಹವಾ ಹಿಡಿಯುತ್ತಿದ್ದರು. ಅಧಿಕ ಗಾಳಿ ತುಂಬಿಸಿದ್ದರಿಂದ ಟೈರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಟೈರ್ನ ರಿಂಗ್ ಬಡಿದು ಮಾರುತಿ ಏಳೆಂಟು ಅಡಿ ಎತ್ತರಕ್ಕೆ ಚಿಮ್ಮಿ ನೆಲಕ್ಕೆ ಬಿದ್ದಿದ್ದಾರೆ. ಎಡಗಾಲು, ಎದೆ, ಪಕ್ಕೆ ಹಾಗೂ ದೇಹದ ಇತರೆಡೆ ತೀವ್ರ ಗಾಯಗಳಾಗಿದ್ದ ಮಾರುತಿಯನ್ನು ದಾವಣಗೆರೆ ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಸೋಮವಾರ ಮೃತಪಟ್ಟರು.
ಪಂಚರ್ ಅಂಗಡಿಯ ಸಂದೀಪ್ ಹಾಗೂ ಬತ್ತಿಕೊಪ್ಪದ ಪರಮೇಶ್ವರಪ್ಪ ಅವರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮಾರುತಿ ಕುಟುಂಬದವರು ಹರಿಹರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.