ADVERTISEMENT

ಕಬಡ್ಡಿಯ ಯುವ ಪ್ರತಿಭೆ ಚೇತನ್

ಅಂತರರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 16:56 IST
Last Updated 11 ಏಪ್ರಿಲ್ 2019, 16:56 IST
ಟ್ರೋಫಿಯೊಂದಿಗೆ ಚೇತನ್‌
ಟ್ರೋಫಿಯೊಂದಿಗೆ ಚೇತನ್‌   

ಬಸವಾಪಟ್ಟಣ: ಸಮೀಪದ ಹೊಸನಗರ ಗ್ರಾಮದ ಯುವಕ ಟಿ. ಚೇತನ್‌ ಅವರು ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮಸ್ಥಾನ ಪಡೆದ ಕರ್ನಾಟಕ ತಂಡದಲ್ಲಿ ಆಟವಾಡಿದ್ದ ಈಗ ಅಂತರರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಏ.30 ರಿಂದ ಮೇ 5 ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದು, ಹೊಸಕೋಟೆಯಲ್ಲಿ ನಡೆಯುವ ತರಬೇತಿ ಶಿಬಿರಕ್ಕೆ ತೆರಳಲು ಸಿದ್ಧರಾಗಿದ್ದಾರೆ.

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಚೇತನ್‌ ಅವರನ್ನು ತಾಯಿ ಜಯಾಬಾಯಿ ಕೂಲಿ ಮಾಡಿ ಸಾಕಿದರು. ಹೊಸನಗರ ಮತ್ತು ಕಣಿವೆಬಿಳಚಿಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮಗಿಸಿದರು.

ADVERTISEMENT

ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದ ಚೇತನ್‌ ನಂತರ ಇಲ್ಲಿನ ಎಲ್‌. ಸಿದ್ದಪ್ಪ ಕಿರಿಯ ಕಾಲೇಜಿನಲ್ಲಿ ಕಬಡ್ಡಿ ಬಗ್ಗೆ ಮತ್ತಷ್ಟು ಕಲಿತು ಯುವಕ ಸಂಘದೊಂದಿಗೆ ಶಿಕಾರಿಪುರ, ಹಾವೇರಿ, ಸೊರಬ, ಸಾಗರ, ದಾವಣಗೆರೆ ಮುಂತಾದ ಕಡೆಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

2018 ನವೆಂಬರ್‌ನಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಷನ್‌ ನಡೆಸಿದ ಆಟಗಾರರ ಆಯ್ಕೆಯಲ್ಲಿ ಸ್ಥಾನ ಪಡೆದ ಚೇತನ್‌ ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ತರಬೇತುದಾರ ಮೆಹಬೂಬ್‌ ಅವರಲ್ಲಿ 15 ದಿನಗಳ ತರಬೇತಿ ಪಡೆದರು. ನಂತರ ಪಂಜಾಬಿನ ಜಲಂದರ್‌ನಲ್ಲಿ ಜನವರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾಗಿ, ಉತ್ತಮ ಪ್ರದರ್ಶನ ನೀಡಿದರು. ಪಂದ್ಯಾವಳಿಯಲ್ಲಿ ಚಾಂಪಿಯನ್‌ ಟ್ರೋಫಿ ಪಡೆದ ಕರ್ನಾಟಕ ರಾಜ್ಯದ ತಂಡದ ಸಾಧನೆಯಲ್ಲಿ ಪಾಲುದಾರರಾದರು.

ಬಡತನದ ಕಾರಣ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗದೇ ಈಗ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎರಡು ವರ್ಷದ ತರಬೇತಿ ಪಡೆದಿದ್ದೇನೆ. ಯಾವುದಾದರೂ ಕಾರ್ಖಾನೆಯಲ್ಲಿ ಉದ್ಯೋಗ ಪಡೆದು ಕಬಡ್ಡಿಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಬಯಕೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.