ಮಲೇಬೆನ್ನೂರು: ಅಕ್ರಮ ಪಂಪ್ಸೆಟ್ ತೆರವು ಮಾಡಿದ ನಂತರವೂ ಕೊಮಾರನಹಳ್ಳಿ ಪಿಯರ್ ಗೇಜ್ ಬಳಿ ಭದ್ರಾ ನಾಲೆಯ ನೀರಿನ ಮಟ್ಟ 4.4 ಅಡಿಗೆ ತಲುಪಿದ್ದು, ರೈತರನ್ನು ಆತಂಕಕ್ಕೆ ತಳ್ಳಿದೆ.
ನಿಗದಿತ ಪ್ರಮಾಣಕ್ಕಿಂತ ನೀರಿನ ಗೇಜ್ ಕಡಿಮೆಯಾದಲ್ಲಿ ಹೋರಾಟ ಅನಿವಾರ್ಯ ಎಂದು ರೈತ ಸಂಘದ ಪ್ರಭುಗೌಡ, ಹೊಳೆಸಿರಿಗೆರೆ ಫಾಲಾಕ್ಷ ಎಚ್ಚರಿಕೆ ನೀಡಿದರು.
ಎಂಜಿನಿಯರುಗಳು ಒಂದೆರಡು ದಿನ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿ ಕೊನೆಭಾಗದ ರೈತರ ಕಣ್ಣೊರೆಸುವ ತಂತ್ರ ಮಾಡಬಾರದು. ಮೇಲ್ಬಾಗದಲ್ಲಿ ನಾಲೆಯ ಮೇಲುಸ್ತುವಾರಿ ಸರಿಯಾಗಿ ನಿರ್ವಹಿಸಿ ಕೊನೆಭಾಗಕ್ಕೆ ನೀರು ತಲುಪಿಸಬೇಕು ಎಂದು ಆಗ್ರಹಿಸಿದರು.
‘ಪ್ರಜಾವಾಣಿ’ ಜತೆ ಮಾತನಾಡಿದ ಭದ್ರಾ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ, ಕೊನೆಭಾಗಕ್ಕೆ ನೀರು ಹರಿಸಲು ತುರ್ತು ಕ್ರಮದ ಅಗತ್ಯವಿದೆ. ಮೇಲ್ಭಾಗದಲ್ಲಿ ಭದ್ರಾ ನಾಲೆ ಗೇಜ್ ಸಮರ್ಪಕ ರೀತಿ ಕಾಪಾಡಲು ಎಸ್ಇ, ಸಿಇ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಅಧಿಕಾರಿಗಳು ನಾಲೆ ಮೇಲೆ ನಿಗಾ ವಹಿಸಬೇಕು ಎಂದರು.
5 ಅಡಿ ಇದ್ದರೆ ಮಾತ್ರ ಕೊನೆಭಾಗಕ್ಕೆ ನೀರು ತಲುಪಲು ಸಾಧ್ಯ. ಕೊನೆ ಭಾಗದ ರೈತರಿಗೆ ಉತ್ತರ ನೀಡಲು ಆಗುತ್ತಿಲ್ಲ ಎಂದು 3ನೇ ಉಪನಾಲಾ ವಿಭಾಗದ ಎಇಇ ಕೃಷ್ಣಮೂರ್ತಿ ತಿಳಿಸಿದರು.
144ನೇ ಸೆಕ್ಷನ್: ಕೊನೆಭಾಗಕ್ಕೆ ನೀರು ತಲುಪಿಸುವ ನಿಟ್ಟಿನಲ್ಲಿ ಭದ್ರಾ ನಾಲಾ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಹರಿಹರ ತಾಲ್ಲೂಕು ದಂಡಾಧಿಕಾರಿ ಕೆ.ಎಂ. ಗುರುಬಸವರಾಜ್ ಗುರುವಾರ 144ನೇ ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.