ದಾವಣಗೆರೆ: ಬೆಳ್ಳುಡಿ ಸಿನಿಮಾಸ್ ಅರ್ಪಿಸುವ ‘ನೋಟಗಾರ’ ಚಿತ್ರದ ಹಾಡಿನ ಚಿತ್ರೀಕರಣ ಮಂಗಳವಾರ ಮತ್ತು ಬುಧವಾರ ನಗರದ ಗಾಜಿನಮನೆಯಲ್ಲಿ ನಡೆಯಿತು.
ವಿಲನ್ ಇದ್ದರೂ ಫೈಟ್ ಇಲ್ಲದ ಈ ಚಿತ್ರವು ಹಾಸ್ಯ, ಸಸ್ಪೆನ್ಸ್ನಿಂದ ಕೂಡಿದೆ. ಇಲ್ಲಿ ಯಾವುದೇ ಲಾಜಿಕ್ ಇಲ್ಲ. ಎಲ್ಲ ಮ್ಯಾಜಿಕ್ ಎಂದು ನಿರ್ದೇಶಕ ಮಂಜು ಹೆದ್ದೂರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಿತ್ಯದ ಜೀವನದಲ್ಲಿ ನಡೆಯುವ ಹಾಸ್ಯಗಳನ್ನೇ ಎತ್ತಿಕೊಂಡು ಕಥೆ ರಚಿಸಲಾಗಿದೆ. ಪ್ರತಿಯೊಬ್ಬರ ವೈಯಕ್ತಿಕ ಜೀವನಕ್ಕೆ ನಾಟುತ್ತದೆ. ಪ್ರೀತಿ, ಪ್ರೇಮ, ಪ್ರಣಯ, ಬದುಕಿನ ಜಂಜಾಟ, ವ್ಯವಹಾರಗಳು ಎಲ್ಲವೂ ಇಲ್ಲಿವೆ. ಪ್ರೇಕ್ಷಕರು ಆರಂಭದಿಂದ ಅಂತ್ಯದವರೆಗೆ ನಕ್ಕು ನಕ್ಕು ಸುಸ್ತಾಗುವಂತೆ ಇದೆ. ಚಿತ್ರೀಕರಣ ಮುಗಿದಿದೆ. ನಾಲ್ಕು ಹಾಡುಗಳಿದ್ದು, ಅದರಲ್ಲಿ ಎರಡು ಹಾಡುಗಳನ್ನು ಸಿಂಗಪುರದಲ್ಲಿ ಚಿತ್ರೀಕರಣ ಮಾಡಬೇಕಿದೆ. ಒಂದು ಹಾಡು ದಾವಣಗೆರೆಯಲ್ಲಿ ಮಾಡಲಾಗಿದೆ. ನವೆಂಬರ್ ಹೊತ್ತಿಗೆ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ ಎಂದು ವಿವರಿಸಿದರು.
ದಾವಣಗೆರೆಯ ಎ.ಎಚ್. ಪರಮೇಶಿ ಹಾಗೂ ಹರ್ಷ ಬೆಳ್ಳುಡಿ ನಿರ್ಮಾಪಕರಾಗಿದ್ದಾರೆ. ಅರ್ಜುನ್ರಾಮ್ ಅವರು ಸಂಗೀತ, ವಿ. ನಾಗೇಂದ್ರ ಪ್ರಸಾದ್ ಮತ್ತು ಚೇತನ್ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಮದನ್, ಹರಿಣಿ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದು, ಎಂ.ಬಿ. ಅಳ್ಳಿಕಟ್ಟಿ ಕ್ಯಾಮೆರಾಮೆನ್ ಆಗಿದ್ದು, ವಿನಯ ಕುಮಾರ್ ಕೂರ್ಗ್ ಸಂಕಲನ ಮಾಡಿದ್ದಾರೆ. ಸಂಚಿತ ಹೆಗ್ಡೆ ಹಾಡಿದ್ದಾರೆ ಎಂದರು.
ನಾಯಕಿ ನಟಿ ತೀರ್ಥಹಳ್ಳಿಯ ಅಶ್ವಿನಿ ಚಂದ್ರಶೇಖರ್, ‘ತಮಿಳು, ತೆಲುಗು, ಮಲೆಯಾಳಂನಲ್ಲಿ ಏಳು ಚಿತ್ರಗಳಲ್ಲಿ ನಟಿಸಿದ್ದು, ಕನ್ನಡದಲ್ಲಿ ಇದು ನಾಲ್ಕನೇಯ ಚಿತ್ರ. ಈಗ ಚಿತ್ರರಂಗದ ದೃಷ್ಟಿಕೋನ ಬದಲಾಗಿದೆ. ಹಿಂದೆ ಹಿರೋ, ಹಿರೋಯಿನ್ ನೋಡುತ್ತಿದ್ದರು. ಈಗ ಕಾನ್ಸೆಪ್ಟ್ ನೋಡುತ್ತಾರೆ’ ಎಂದು ಹೇಳಿದರು.
ನಾಯಕ ನಟ ಸಿದ್ದು ಮೂಲಿಮನಿ, ‘ಲಂಬೋದರ, ರಂಗಿತರಂಗ ಚಿತ್ರಗಳು, ಪಾರು ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದು, ನಾಯಕ ನಟನಾಗಿ ಇದು ಮೊದಲ ಚಿತ್ರ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.