ADVERTISEMENT

`ಅಧ್ಯಾತ್ಮ, ಆಧುನಿಕ ವಿಜ್ಞಾನದ ಅರಿವು ಮೇಳೈಸಲಿ'

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 8:07 IST
Last Updated 10 ಏಪ್ರಿಲ್ 2013, 8:07 IST

ಹುಬ್ಬಳ್ಳಿ: `ಭಾರತೀಯ ಪ್ರಾಚೀನ ಸಂಸ್ಕೃತಿಯ ಪರಂಪರೆ ಹಾಗೂ ಆಧುನಿಕ ಶಿಕ್ಷಣ ಪದ್ಧತಿ ಇವರೆ ಡರ ಅರಿವನ್ನು ನಮ್ಮ ವಿದ್ಯಾರ್ಥಿಗಳು ಹೊಂದಲಿ' ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಇಲ್ಲಿ ಅಭಿಪ್ರಾಯಪಟ್ಟರು.

ವಿದ್ಯಾನಗರದ ಶಾಂತಿ ಕಾಲೊನಿಯಲ್ಲಿರುವ ಅಖಿಲ ಭಾರತ ಮಾಧ್ವ ಮಹಾಮಂಡಳದ ಪೇಜಾ ವರ ವಿದ್ಯಾರ್ಥಿನಿಲಯದ ಸುವರ್ಣ ಸಂಭ್ರಮದ ನಿಮಿತ್ತ ಮಂಗಳವಾರ `ತುಲಾಭಾರ' ಸೇವೆ ಸ್ವೀಕರಿಸಿದ ಬಳಿಕ ಅವರು ಆಶೀರ್ವಚನ ನೀಡಿದರು.

ನಮ್ಮ ಪ್ರಾಚೀನ ಪರಂಪರೆ ಅಮೋಘವಾದದ್ದು, ಅಧ್ಯಾತ್ಮ, ಪ್ರಾಚೀನ ಸಂಸ್ಕೃತಿಯ ಮೂಲಕ ನಮ್ಮ ವ್ಯಕ್ತಿತ್ವದ ಬೆಳವಣಿಗೆಯಾಗಬೇಕು. ಭಾರತೀಯರ ಹೃದಯ ಕಮಲ ಅರಳಬೇಕಾದರೆ ಅಧ್ಯಾತ್ಮದ ಪ್ರಕಾಶ ಬೇಕೇ ಬೇಕು ಎಂದು ಹೇಳಿದ ಸ್ವಾಮೀಜಿ, ಜತೆಗೆ ಆಧುನಿಕ ವಿಜ್ಞಾನದಿಂದ ನಮ್ಮ ಸಮಾಜ ಪ್ರಗತಿಯಾಗುತ್ತದೆ. ಹೀಗಾಗಿ ನಮಗೆ ಆಧುನಿಕ ಶಿಕ್ಷಣ ಕೂಡ ಅಷ್ಟೇ ಅಗತ್ಯ ಎಂದು ಪ್ರತಿಪಾದಿಸಿ ದರು.

ಆಂಜನೇಯನನ್ನು ಉದಾಹರಿಸಿದ ಸ್ವಾಮೀಜಿ, ವಿದ್ಯಾರ್ಥಿಗಳಲ್ಲಿ ಆಂಜನೇಯನ ಭಕ್ತಿ ಮತ್ತು ಶಕ್ತಿ ಮೇಳೈಸಬೇಕು ಎಂದರು.
`ಬ್ರಾಹ್ಮಣ್ಯ ಮತ್ತು ಹಿಂದೂ ಸಮಾಜದ ರಕ್ಷಣೆ ಯೇ ನಮ್ಮ ಮೂಲ ಉದ್ದೇಶ' ಎಂದು ಹೇಳಿದ ಸ್ವಾಮೀಜಿ, ಆ ಹಿನ್ನೆಲೆಯಲ್ಲಿಯೇ ಬ್ರಾಹ್ಮಣ ವಿದ್ಯಾ ರ್ಥಿಗಳ ಓದು, ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಬ್ರಾಹ್ಮಣ್ಯ ದೇವರೇ ಕೊಟ್ಟ ಮೀಸಲಾತಿ
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, `ಬ್ರಾಹ್ಮಣ್ಯ ದೇವರೇ ನಮಗೆ ಕೊಟ್ಟಿರುವ ಮೀಸಲಾತಿ,  ನಮ್ಮ ಪುರಾತನ ಸಂಸ್ಕೃತಿ, ಪರಂಪರೆ, ನಮ್ಮ ಗುರುಹಿರಿಯರ ಮೇಲಿನ ಗೌರವ, ಭಕ್ತಿಭಾವದ ಸಂಸ್ಕಾರ, ಉತ್ತಮ ಆಚಾರ, ವಿಚಾರಗಳೊಂದಿಗೆ ಮುನ್ನಡೆಯುತ್ತ ನಮ್ಮಲ್ಲಿನ ಬುದ್ಧಿಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡಲಿ ಯಾವುದೇ ಉನ್ನತ ಸ್ಥಾನಮಾನಕ್ಕಾದರೂ ಏರಬಹುದು. ಹೀಗಾಗಿ ನಮಗೇನೂ ಮೀಸಲಾತಿ ಅಗತ್ಯವಿಲ್ಲ, ಮೀಸಲಾತಿ ಸಿಕ್ಕಿಲ್ಲ ಎಂದು ಚಿಂತಿಸುವ ಅಗತ್ಯವೂ ಇಲ್ಲ' ಎಂದರು.

ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಹೋರಾಡಿ
ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ, ಅನಾಚಾರಗಳ ವಿರುದ್ಧ ಸಿಡಿದೇಳುವ ಪ್ರವೃತ್ತಿ ಕಡಿಮೆಯಾಗಿದ್ದು ಅವುಗಳಿಗೇ ಮಾನ್ಯತೆ ಸಿಗುತ್ತಿವೆ. ಹೀಗಾಗಿ
ಹೆಚ್ಚುತ್ತಿರುವ ಭ್ರಷ್ಟಾಚಾರದ ವಿರುದ್ಧ ನಾವೆಲ್ಲವೂ ಹೋರಾಡಬೇಕಿದೆ ಎಂದರು.

ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ  ಮಖ್ಯ ಅತಿಥಿಗಳಾಗಿ ಶಿಲ್ಪಾ ಶೆಟ್ಟರ್, ಪಾಲಿಕೆ ಸದಸ್ಯೆ ಲಕ್ಷ್ಮಿ ಲಕ್ಷ್ಮಣ ಉಪ್ಪಾರ,  ಡಾ.ಜೆ.ವಿ. ಆಚಾರ್ಯ ಪಾಲ್ಗೊಂಡಿದ್ದರು. ಟ್ರಸ್ಟ್ ಆಡಳಿತ ಮಂಡಳಿ  ಅಧ್ಯಕ್ಷ ಮದನ ಬಿ.ದೇಸಾಯಿ, ಉಪಾಧ್ಯಕ್ಷ ಡಾ.ವಿ.ಜಿ. ನಾಡಗೌಡ, ಕಾರ್ಯದರ್ಶಿ ಶ್ರೀತಾಂತ ಕೆಮ್ತೂರು, ಖಜಾಂಚಿ ಗುರುರಾಜ ಬಾಗಲಕೋಟೆ, ಸದಸ್ಯರಾದ ಶ್ರೀನಿವಾಸ ಜಿ.ದೇಶಪಾಂಡೆ, ಪ್ರಭಾಕರ ಮಂಗ ಳೂರು, ಗುಂಡಪ್ಪ ವಾಳ್ವೇಕರ, ಅನಂತಪದ್ಮನಾಭ ಐತಾಳ, ಗೋಪಾಲ ಕುಲಕರ್ಣಿ ಉಪಸ್ಥಿತರಿದ್ದರು.

ಶೆಟ್ಟರ್ ವಿವಾದಾತೀತ ಸಿಎಂ
`ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳುಗಳಾಗಿವೆ. ಇಷ್ಟರವರೆಗೆ ಯಾವುದೇ ಒಂದು ಹಗರಣವಾಗಲಿ, ವಿವಾದಗಳಾಗಲಿ ಅವರ ಬಗ್ಗೆ ಕೇಳಿಬಂದಿಲ್ಲ, ಅಷ್ಟು ಉತ್ತಮವಾಗಿ ಅವರು  ಕಾರ್ಯನಿರ್ವಹಿಸು ತ್ತಿದ್ದಾರೆ. ಮುಂದಿನ ಅವಧಿಗೆ ಕೂಡ ಅವರೇ ಮುಖ್ಯಮಂತ್ರಿಗಳಾಗಲಿ' ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರು ಶೆಟ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.