ADVERTISEMENT

ಆಳವಾದ ಜ್ಞಾನವಿರುವವನೇ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 10:15 IST
Last Updated 12 ಮಾರ್ಚ್ 2011, 10:15 IST
ಆಳವಾದ ಜ್ಞಾನವಿರುವವನೇ ಶಿಕ್ಷಕ
ಆಳವಾದ ಜ್ಞಾನವಿರುವವನೇ ಶಿಕ್ಷಕ   

ಧಾರವಾಡ: “ಆಳವಾದ ಜ್ಞಾನ, ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸುವುದು ಹಾಗೂ ಉತ್ತಮ ಮನೋಸ್ಥೈರ್ಯ ಹೊಂದಿದವನು ಶಿಕ್ಷಕನಾಗಲು ಸಾಧ್ಯ” ಎಂದು ವಿಶ್ರಾಂತ ಕುಲಪತಿ ಪ್ರೊ. ಎಂ.ಐ.ಸವದತ್ತಿ ಹೇಳಿದರು. ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಭವನದಲ್ಲಿ ಗುಲಬರ್ಗಾದ ಕರ್ನಾಟಕ ರಾಜ್ಯ ಕೇಂದ್ರೀಯ ವಿಶ್ವವಿದ್ಯಾಲಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಶಿಕ್ಷಣದಲ್ಲಿ ಹೊಸ ಒಲವುಗಳು ಕುರಿತು ಆಯೋಜಿಸಿದ್ದ ಕಾರ್ಯಾಗಾರ ದಲ್ಲಿ ಅವರು ಮಾತನಾಡಿದರು.

ಪ್ರಶ್ನೆ ಕೇಳುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯದಿದ್ದರೆ ಅವರಲ್ಲಿ ಪ್ರೇರಣಾ ಶಕ್ತಿ ಸತ್ತುಹೋಗುತ್ತದೆ. ಆದ್ದರಿಂದ ಇದಕ್ಕೆ ಶಿಕ್ಷಕ ಅವಕಾಶ ನೀಡಬಾರದು. ಭವಿಷ್ಯದ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಕರಾಗಿ, ಅವರ ಪ್ರತಿಭೆಯನ್ನು ಹೊರಹಾಕುವಲ್ಲಿ ಶ್ರಮಿಸಬೇಕು. ಆದರೆ ಇಂದು ಶಿಕ್ಷಣ ವ್ಯಾಪಾರೀಕರಣ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕುಲಪತಿ ಪ್ರೊ. ಎಚ್.ಬಿ.ವಾಲೀಕಾರ ಉದ್ಘಾಟಿಸಿ, ಕೇವಲ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗಷ್ಟೇ ಅಲ್ಲದೇ ಪದವಿ ಕಾಲೇಜುಗಳ ಉಪನ್ಯಸಕರಿಗೂ ಇಂಥ ಕಾರ್ಯಾಗಾರದ ಅವಶ್ಯಕತೆ ಇದೆ. ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಲು ಇಂಥ ಕಾರ್ಯಾಗಾರಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು. ಸುಮಿತ್ರಾ ಕಾಡದೇವರಮಠ ಪ್ರಾರ್ಥಿಸಿದರು. ಪ್ರೊ. ಎಂ.ವಿ.ಅಳಗವಾಡಿ ಸ್ವಾಗತಿಸಿದರು. ಎಸ್.ಎಲ್.ಭಂಡಾರಕರ ನಿರೂಪಿಸಿ, ವಂದಿಸಿದರು.

ಪ್ರವೇಶಾವಕಾಶ
ಧಾರವಾಡ: ಇಲ್ಲಿಯ ಕ್ಯಾರಕೊಪ್ಪ ರಸ್ತೆಯಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಏ. 18ರೊಳಗೆ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ 0836-2472225 ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.