ಧಾರವಾಡ: ‘ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದ ಕಡಲೆ ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕು’ ಎಂದು ಆಗ್ರಹಿಸಿ ನವಲಗುಂದ ತಾಲ್ಲೂಕಿನ ಶಿರೂರು ಗ್ರಾಮದ ರೈತರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
‘ಕಳೆದ ಹಿಂಗಾರಿನಲ್ಲಿ ರೈತರು ಬೆಳೆದ ಕಡಲೆಯನ್ನು ಸರ್ಕಾರ ಖರೀದಿ ಮಾಡಿದೆ. ಆದರೆ, ರೈತರಿಗೆ ಬರಬೇಕಾದ ಹಣ ಬಂದಿಲ್ಲ. ಈಗ ರೈತರು ಬಿತ್ತನೆ ಕಾರ್ಯ ಮಾಡಬೇಕಿದೆ. ಸಾಲಮನ್ನಾ ಆಗದ್ದರಿಂದಲೂ ತೊಂದರೆಯಲ್ಲಿದ್ದಾರೆ. ಹೀಗಾಗಿ, ಕೂಡಲೇ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
‘2016–17ನೇ ಸಾಲಿನಲ್ಲಿ ರೈತರು ಭರಿಸಿದ್ದ ಬೆಳೆವಿಮೆ ಹಣ ಸರಿಯಾಗಿ ಇನ್ನು ರೈತರ ಖಾತೆಗಳಿಗೆ ಜಮಾ ಆಗಿಲ್ಲ. ಸರ್ಕಾರ ಈ ಕೂಡಲೇ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು. ಆಯಟ್ಟಿ, ಶಿರೂರ, ಗುಮ್ಮಗೋಳ, ಬ್ಯಾಲ್ಯಾಳ, ಹಣಸಿ, ಜಾವೂರ ಮತ್ತು ಹೆಬ್ಬಾಳ ಗ್ರಾಮದವರೆಗಿನ ರಸ್ತೆ ಹಾಳಾಗಿದ್ದು ಕೂಡಲೇ ದುರಸ್ತಿ ಮಾಡಬೇಕು’ ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಬಾಳನಗೌಡ್ರ, ಶೇಖಪ್ಪ ಬಡಿಗೇರ, ನಿಂಗಪ್ಪ, ಐ.ಎಂ.ಪುಡಕಲಕಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.