ADVERTISEMENT

ಚಕ್ಕಡಿ ಸ್ಪರ್ಧೆ: ಕಂಕಣವಾಡಿ ಜೋಡೆತ್ತಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST
ಚಕ್ಕಡಿ ಸ್ಪರ್ಧೆ: ಕಂಕಣವಾಡಿ ಜೋಡೆತ್ತಿಗೆ ಪ್ರಶಸ್ತಿ
ಚಕ್ಕಡಿ ಸ್ಪರ್ಧೆ: ಕಂಕಣವಾಡಿ ಜೋಡೆತ್ತಿಗೆ ಪ್ರಶಸ್ತಿ   

ಹುಬ್ಬಳ್ಳಿ: ತಲಾ ಏಳು ಲಕ್ಷ ರೂಪಾಯಿ ಕಿಮ್ಮತ್ತಿನ ಕಂಕಣವಾಡಿಯ ಎತ್ತಿನ ಜೋಡಿಯು ಮಂಗಳವಾರ ಧಾರವಾಡ ಜಿಲ್ಲಾ ಉತ್ಸವದ ಚಕ್ಕಡಿ ಓಟ ಸ್ಪರ್ಧೆಯ ಪ್ರಥಮ ಪ್ರಶಸ್ತಿಯನ್ನು ತಮ್ಮ ಕೊರಳಿಗೆ ಹಾಕಿಕೊಂಡಿತು.

ನೃಪತುಂಗಬೆಟ್ಟದ ಮಡಿಲಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲ ಸಮೀಪ ನಡೆದ ಈ ಚಕ್ಕಡಿ ಓಟದಲ್ಲಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಕಂಕಣವಾಡಿಯ ಮೋಹನರಾವ್ ಶಂಕರರಾವ್ ದೇಸಾಯಿಯವರ ಎತ್ತುಗಳು 50001 ರೂಪಾಯಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.

ಈ ಜೋಡಿ ಆರು ಕಿಲೋಮೀಟರ್ ಅಂತರದ ಈ ಸ್ಪರ್ಧೆಯಲ್ಲಿ 11 ಪ್ರತಿಸ್ಫರ್ಧಿಗಳನ್ನು ಹಿಂದಿಕ್ಕಿತು. ಮಹಾರಾಷ್ಟ್ರದ ಮಿರಜ್‌ನ ಬಾಳಾಸಾಹೇಬ ತಮ್ಮಣ್ಣ ಕುರಳಿಯವರ ಜೋಡೆತ್ತು ದ್ವಿತೀಯ, ಬಾಗಲಕೋಟೆಯ ಸೂಳೆಬಾವಿಯ ಪ್ರಕಾಶ ಕುರಿಯವರ ಜೋಡಿ ತೃತೀಯ ಸ್ಥಾನ ಪಡೆದವು.

ಸಂಜೆ ನಾಲ್ಕು ಗಂಟೆಗೆ ಸ್ಪರ್ಧೆಯನ್ನು ಉದ್ಘಾಟಿಸಿದ ಮುಖ್ಯ ಅತಿಥಿಗಳ ಬಂದೂಕಿನಿಂದ ಗುಂಡು ಹಾರುವ ಮೊದಲೇ ಓಟ ಕಿತ್ತ ಎತ್ತಿನ ಬಂಡಿಗಳನ್ನು ನೋಡಲು ಸಾವಿರಾರು ಜನ ಸೇರಿದ್ದರು. ಬಂಡಿಗಳ ಓಟದ ಹಾದಿಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡರು. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಯಿತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.