ADVERTISEMENT

ನಗರದ ಅಂದಗೆಡಿಸುವವರನ್ನು ಬಂಧಿಸಿ: ಡಿ.ಸಿ.ಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 6:24 IST
Last Updated 25 ಅಕ್ಟೋಬರ್ 2017, 6:24 IST

ಧಾರವಾಡ: ‘ನಗರವನ್ನು ಸುಂದರಗೊಳಿಸುವ ಭಾಗವಾಗಿ ಕರ್ನಾಟಕ ಕಾಲೇಜು ರಸ್ತೆಯ ಗೋಡೆಯ ಮೇಲೆ ಬಿಡಿಸಿದ್ದ ಚಿತ್ತಾರಗಳನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಕಾರ್ಯಪಡೆ (ಎಚ್‌ಡಿಎಎಫ್‌) ಸದಸ್ಯರು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ನಗರವನ್ನು ಹಸಿರುಯುಕ್ತ ಹಾಗೂ ಸುಂದರಗೊಳಿಸುವ ಸಲುವಾಗಿ ಎಂಟು ತಿಂಗಳ ಹಿಂದೆ ಸಾವಿರಕ್ಕೂ ಅಧಿಕ ನಾಗರಿಕರು ಸೇರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಹಯೋಗದಲ್ಲಿ ಗೋಡೆಯನ್ನು ಸ್ವಚ್ಛಗೊಳಿಸಲಾಗಿತ್ತು.

ಆಸಕ್ತರು ಹಾಗೂ ಕಲಾವಿದರು ಸೇರಿದಂತೆ 200ಕ್ಕೂ ಅಧಿಕ ಮಂದಿ ಗೋಡೆಯ ಮೇಲೆ ಸುಂದರವಾದ ಚಿತ್ರಗಳನ್ನು ರಚಿಸಿದ್ದರು. ಒಂದು ಕಿಲೋ ಮೀಟರ್‌ಗೂ ಹೆಚ್ಚು ಉದ್ದದ ಗೋಡೆಯನ್ನು ಸುಂದರಗೊಳಿಸಲಾಗಿತ್ತು. ಆದರೆ ಈ ಗೋಡೆಗೆ ಪೋಸ್ಟರ್‌ ಅಂಟಿಸುವುದು ಹಾಗೂ ಬರಹಗಳ ಮೂಲಕ ಗೋಡೆಯನ್ನು ವಿರೂಪಗೊಳಿಸಲಾಗಿದೆ’ ಎಂದು ಆರೋಪಿಸಿದ್ದಾರ.

ADVERTISEMENT

‘ಕರ್ನಾಟಕ ಸಾರ್ವಜನಿಕ ಸ್ಥಳ ಕಾಯ್ದೆ ಅನ್ವಯ ಈ ಕೃತ್ಯ ಶಿಕ್ಷೆಗೆ ಅರ್ಹ. ಇಂಥ ಕೃತ್ಯಗಳಿಗೆ ಶಿಕ್ಷೆ ನೀಡಿದ್ದೇ ಆದಲ್ಲಿ, ಅದು ಇತರರಿಗೆ ಪಾಠವಾಗಲಿದೆ. ಇದರಿಂದ ನಗರದ ಸೌಂದರ್ಯವನ್ನು ಕಾಪಾಡಲು ಅನುಕೂಲವಾಗಲಿದೆ’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

‘ಇದು ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವುದು ಅಗತ್ಯ. ಇದಕ್ಕಾಗಿ ಜಾಹೀರಾತು ಅಳವಡಿಸಲು ಅವಳಿ ನಗರದಲ್ಲಿ ಕೆಲ ನಿರ್ದಿಷ್ಟ ಸ್ಥಳಗಳನ್ನು ನಿಗದಿಪಡಿಸಬೇಕು. ಉದಾಹರಣೆಗೆ ಮಾರುಕಟ್ಟೆ, ಬಸ್‌ ನಿಲ್ದಾಣ, ಮಾಲ್‌ ಇತ್ಯಾದಿ ಕಡೆಗಳಲ್ಲಿ ನಿಗದಿತ ಸ್ಥಳ ಹೊರತುಪಡಿಸಿ ಬೇರೆಡೆ ಯಾವುದೇ ಜಾಹೀರಾತು ಫಲಕ ಅಳವಡಿಸುವುದು ಅಥವಾ ಗೋಡೆ ಬರಹ ಬರೆಯುವುದನ್ನು ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಆದರೆ ನಮ್ಮಲ್ಲಿ ಜನಜಾಗೃತಿ ಕಡಿಮೆ ಇದೆ. ನಗರದ ಸೌಂದರ್ಯ ಕಾಪಾಡುವ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಗರ ಸೌಂದರ್ಯ ಹಾಳು ಮಾಡಿದರೆ ಇರುವ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.

ಎಚ್‌ಡಿಎಎಫ್‌ ಸದಸ್ಯರು ತಾವು ಗಮನಿಸಿದ ಹಾಗೂ ಸೆರೆ ಹಿಡಿದ ಕಾಯ್ದೆ ಉಲ್ಲಂಘನೆಯ ಚಿತ್ರಗಳೊಂದಿಗೆ ಹಲವರು ಸಹಿಯೊಂದಿಗೆ ಸಂಪೂರ್ಣ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗೆ ನೀಡಿದರು. ಇದೇ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಅವರಿಗೂ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.