ಧಾರವಾಡ: ತಾಲ್ಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯ ಸ್ಥಳೀಯ ಸಮಿತಿಯನ್ನು ಮುಳಮುತ್ತಲ ಗ್ರಾಮಕ್ಕೆ ವರ್ಗಾಯಿಸುವಂತೆ ಒತ್ತಾಯಿಸಿ ಮುಳಮುತ್ತಲ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಸುಮಾರು 30 ವರ್ಷಗಳಿಂದ ಮಂಗಳಗಟ್ಟಿ ಲೋಕಲ್ ಕಮಿಟಿಯವರು ಮುಳಮುತ್ತಲ ಗ್ರಾಮದ ಗ್ರಾಮಸ್ಥರಿಗೆ ಪಡಿತರ ವಿತರಣೆ ಮಾಡುತ್ತಿದ್ದಾರೆ. ಈ ಸ್ಥಳೀಯ ಸಮಿತಿಯವರು ಒಂದು ಕಾರ್ಡಿಗೆ 30 ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಿದ್ದಾರೆ.
ತಿಂಗಳಲ್ಲಿ ಮೂರು ದಿನ ಮಾತ್ರ ಕಾಳು ಹಂಚಿಕೆ ಮಾಡುತ್ತಿದ್ದಾರೆ. ಮಧ್ಯಾಹ್ನ 1ರ ನಂತರ ಒಂದು ಅಂಗಡಿ ತೆಗೆಯುತ್ತಾರೆ.
ಇದರಿಂದ ಗೊಂದಲ ಉಂಟಾಗುತ್ತಿದೆ. ಮಂಗಳಗಟ್ಟಿಗಿಂತ ಮುಳಮುತ್ತಲ ಗ್ರಾಮದಲ್ಲಿ ಪಡಿತರ ಚೀಟಿಗಳು ಹೆಚ್ಚಾಗಿ ಇವೆ. ಆದ್ದರಿಂದ ಮುಳಮುತ್ತಲ ಗ್ರಾಮಕ್ಕೆ ಈ ನ್ಯಾಯಬೆಲೆ ಅಂಗಡಿಯನ್ನು ಸ್ಥಳಾಂತರಿಸಬೇಕು ಎಂದು ಗ್ರಾಮದ ನಿವಾಸಿಗಳಾದ ಮೋಹನ ಬಡಿಗೇರ, ಬಾಬು ನಿಂಬೋಜಿ, ಬಾಳನಗೌಡ ಪಾಟೀಲ, ಹನುಮಂತಪ್ಪ, ಬಸಪ್ಪ ತುರಮರಿ, ಎಂ.ವೈ.ಕುಂಬಾರಗೊಪ್ಪ ಮತ್ತಿತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.