ADVERTISEMENT

‘ಪ್ರೀತಿ, ಭ್ರಾತೃತ್ವದಿಂದ ದೇಶದ ಒಗ್ಗಟ್ಟು’

ಈದ್–ಉಲ್‌–ಫಿತ್ರ್ ಹಬ್ಬದಲ್ಲಿ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸಂದೇಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 7:52 IST
Last Updated 17 ಜೂನ್ 2018, 7:52 IST

ಧಾರವಾಡ: ‘ದೇಶದ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ, ಭ್ರಾತೃತ್ವದಿಂದ ಇರುವ ಮೂಲಕ ದೇಶದ ಒಗ್ಗಟ್ಟನ್ನು ಕಾಪಾಡಬೇಕು. ದೇವರು ನೀಡುವ ಶ್ರೀಮಂತಿಕೆಯನ್ನು ಬಡವರ ಏಳಿಗೆಗೆ ಹಾಗೂ ಸಮಾಜದ ಒಳಿತಿಗೆ ಮೀಸಲಿಡಬೇಕು’ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಹೇಳಿದರು.

ಇಲ್ಲಿನ ಗುಲಗಂಜಿಕೊಪ್ಪದಲ್ಲಿರುವ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಜರುಗಿದ ಈದ್–ಉಲ್–ಫಿತ್ರ್ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಬ್ಬದ ಸಂದೇಶ ಸಾರಿದರು.

‘ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಹಲವು ಭಾಷೆ, ಸಂಸ್ಕೃತಿಗಳು ಇದ್ದರೂ ನಾವೆಲ್ಲರೂ ಭಾರತೀಯರು. ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ, ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬರನ್ನೂ ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ADVERTISEMENT

‘ಸ್ಮಶಾನದ ಜಮೀನಿನ ಆವರಣದ ಗೋಡೆ ಕಾರ್ಯ ಪೂರ್ಣಗೊಳ್ಳುತ್ತಿದ್ದು, ಪೂರ್ವಜರ ಗೋರಿಗಳು ಹಾಳಾಗದಂತೆ ಕಾಪಾಡುವ ಪ್ರಯತ್ನ ಅಂಜುಮನ್ ಸಂಸ್ಥೆ ವತಿಯಿಂದ ಸಾಗಿದೆ. ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ  ವಿದ್ಯಾರ್ಥಿ ನಿಲಯ ನಿರ್ಮಾಣ ಹಂತದಲ್ಲಿದ್ದು, ಈ ವರ್ಷವೇ ಕಾರ್ಯಾರಂಭ ಮಾಡಲಿದೆ’ ಎಂದರು.

‘ಪ್ರತಿಯೊಬ್ಬರ ಪ್ರಾರ್ಥನೆಯ ಫಲವಾಗಿ ಈ ಬಾರಿ ಉತ್ತಮ ಮಳೆ ಬಂದಿದೆ. ಬೆಳೆಯೂ ಉತ್ತಮವಾಗಿ ಬೆಳೆದು ರೈತರಿಗೆ ಅನುಕೂಲವಾಗಲಿ. ಆ ಮೂಲಕ ಸತತ ಬರಗಾಲದಿಂದ ತೊಂದರೆಗೆ ಸಿಲುಕಿದ್ದ ಕೃಷಿಕರಿಗೂ ದೇವರು ನೆಮ್ಮದಿ ನೀಡಲಿ’ ಎಂದು ತಮಟಗಾರ ಪ್ರಾರ್ಥಿಸಿದರು.

ಪ್ರಾರ್ಥನೆಯಲ್ಲಿ ಸಾವಿರಾರು ಮುಸಲ್ಮಾನರು ಪಾಲ್ಗೊಂಡಿದ್ದರು. ಮೌಲಾನಾ ವಸೀಂ ಅಹ್ಮದ್‌ ಖತೀಬ್‌ ಅವರು ಪ್ರಾರ್ಥನೆ ಬೋಧಿಸಿದರು. ಹೊಸ ವಸ್ತ್ರ ಧರಿಸಿ, ಸುಗಂಧ ದ್ರವ್ಯ ಸಿಂಪಡಿಸಿಕೊಂಡು ಅಲ್ಲಾಹುವನ್ನು ಸ್ಮರಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪುಟ್ಟ ಮಕ್ಕಳು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.

ಅಬ್ದುಲ್ ಅಜೀಜ್ ದಾಸನಕೊಪ್ಪ, ನಜೀರ್ ಹುಸೇನ್ ಮನಿಯಾರ್, ರಫೀಕ್ ಅಹ್ಮದ್ ಶಿರಹಟ್ಟಿ, ಖಲೀಲ್ ಅಹ್ಮದ್ ದಾಸನಕೊಪ್ಪ, ಎಂ.ಐ.ಮೊಕಾಶಿ, ಎ.ಎ.ಬೆಳವಡಿ, ಎ.ಎಂ.ಜಮಾದಾರ, ಎಸ್‌.ಎಸ್‌.ಸೌದಾಗರ, ಡಾ. ಎಸ್‌.ಎ.ಸರಗೀರೊ, ಇಜಾಜ್ ಅಹಮ್ಮದ್ ಮುಲ್ಲಾ, ಸಮೀರ ಪಾಗೆ, ಇಂಮ್ತಿಯಾಜ ಮುಲ್ಲಾ, ಹನೀಫ್‌ ಮುನವಳ್ಳಿ, ಮೈನುದ್ದೀನ್ ಇದ್ದರು.

ವಿವಿಧೆಡೆ ಸಂಭ್ರಮ

ಹುಬ್ಬಳ್ಳಿ: ಹಳೇಹುಬ್ಬಳ್ಳಿ, ಅಮರಗೋಳ, ನವನಗರ ಮತ್ತು ಬೈರಿದೇವರಕೊಪ್ಪ ಸೇರಿದಂತೆ ವಿವಿಧೆಡೆ ಶನಿವಾರ ಈದ್‌ ಉಲ್‌ ಫಿತ್ರ್‌ ಅನ್ನು ಸಂಭ್ರಮದಿಂದ ಆಚರಿಸಲಾಯಿತು.

ಹಳೇ ಹುಬ್ಬಳ್ಳಿ:

ಇಲ್ಲಿನ ಈದ್ಗಾ ಮೈದಾನದಲ್ಲಿ ಸಂಭ್ರಮದಲ್ಲಿ ಆಚರಿಸಲಾಯಿತು. ಧರ್ಮಗುರು ನಿಯಾಜ್‌ ಆಲಂ ಶೇಖ್‌ ಅವರು ಕುರಾನ್‌ ಪಠಣ ಮಾಡುವ ಮೂಲಕ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು.

ಪಾಲಿಕೆ ಸದಸ್ಯ ಅಲ್ತಾಫ್‌ ನವಾಜ್‌ ಕಿತ್ತೂರ, ಉಸ್ಮಾನ್‌ ಸಾಬ್‌ ಕಾಲೇಬುಡ್ಡೆ, ಐ.ಡಿ. ಜಾಲಗಾರ, ಆರೀಫ್‌ ಮುಜಾವರ್, ಮುಸ್ತಾಕ್‌ ಸುಂಡಕೆ, ಎಂ.ಎ. ಪಠಾಣ, ಮಹಮ್ಮದ್‌ ಯೂಸೂಫ್‌ ಬಂಗ್ಲೆವಾಲೆ, ಇಮ್ರಾನ್‌ ಕಿತ್ತೂರ ಪಾಲ್ಗೊಂಡಿದ್ದರು.

ಅಮರಗೋಳ: ಅಮರಗೋಳ ಈದ್ಗಾ ಮೈದಾನದಲ್ಲಿ ಧಾರ್ಮಿಕ ಗುರು ಸೌಕತ್‌ಅಲಿ ಮುಲ್ಲಾ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು. ಅಮರಗೋಳ ಮುಸ್ಲಿಂ ಸಮಾಜದ ಅಧ್ಯಕ್ಷ ದಾದಾಪೀರ್‌ ದರ್ಗಾದ, ಯುಸೂಫ್‌ಸಾಬ್‌ ಮುಲ್ಲಾ, ಮಾಬುಸಾಬ್‌ ನದಾಫ್‌, ನಜೀರಅಹ್ಮದ್‌ ಕೋಲಕಾರ, ಮಹಮ್ಮದ್‌ ರಫೀಕ್‌ ದರ್ಗಾದ, ಮಲ್ಲಿಕಾರ್ಜುನ ಹೊರಕೇರಿ, ಮಾಬುಸಾಬ್‌ ಖಾನಸಾಬನವರ, ಖಾದೀರ್‌ಸಾಬ್‌ ದರ್ಗಾದ, ಬಾಬಾಸಾಬ್‌ ಗುಂಡೂರ, ಖಾಸಿಂಸಾಬ್‌ ದರ್ಗಾದ, ಬಾಬಾಜಾನ್‌ ಅರಳಿಕಟ್ಟಿ, ಇಸಾಕ್‌ ದರ್ಗಾದ, ಮಹಮ್ಮದ್‌ಸಾಬ್‌ ನದಾಫ್, ಅಬ್ಬಾಸಾಬ್‌ ಮುಲ್ಲಾ, ಅಬ್ಬುಸಲಿ ಮುಲ್ಲಾ, ಮುಕ್ತುಂಹುಸೇನ್‌ ಕಲ್ಲೂರ, ಸಯ್ಯದ್‌ ಗುಂಡೂರ ಪಾಲ್ಗೂಂಡಿದ್ದರು.

ಬೈರಿದೇವರಕೊಪ್ಪ: ಇಲ್ಲಿನ ಈದ್ಗಾ ಮೈದಾನದಲ್ಲಿ ಮೌಲಾನಾ ಇಸೂಫ್‌ ರಜಾ ಸಾಹೇಬ್‌ ಅವರ ನೇತೃತ್ವದಲ್ಲಿ ನೂರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಅಬ್ದುಲ್ ರಹೀಂ ರಜಾ ಹೊಸಮನಿ, ಮೌಲಾನಾ ರಫೀಕ್‌, ಅಬ್ದುಲ್ ಮುನಾಫ್‌ ಬಡಾಕಾನವರ, ಮಕ್ತುಂಸಾಬ್‌, ಗೌಸ್‌ ಕಳ್ಳಿಮನಿ, ಮೆಹಬೂಬ್, ಐ.ಎಚ್. ಬಡೇಕಾನವರ, ಅಕ್ಬರ್‌ ಬೆಳಗಾಂಕರ್, ಫಯಿಮ್ ಬೆಳಗಾಂಕರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.