ಹುಬ್ಬಳ್ಳಿ: ‘ವಾಸ್ತವದಲ್ಲಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿ ಇರುವುದಿಲ್ಲ. ಆದರೆ, ವಿವಿಧ ರೀತಿಯ ರಿಯಾಯಿತಿ ದರದ ಬಸ್ಪಾಸ್ ಸೌಲಭ್ಯದಂತಹ ಜನಪ್ರಿಯ ಕಾರ್ಯಕ್ರಮಗಳಿಗೆ ಸಂಸ್ಥೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದರಿಂದ ನಷ್ಟ ಕಂಡು ಬರುತ್ತದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟರು.
ನಗರ ಬಂಡಿವಾಡ ಅಗಸಿಯಲ್ಲಿ ಬುಧವಾರ ನಗರ ಸಾರಿಗೆ ಬಸ್ ನಿಲ್ದಾಣದ (ಸಿಬಿಟಿ) ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಬಸ್ಪಾಸ್ಗಳನ್ನು ನೀಡಲಾಗುತ್ತದೆ. ಇದರಿಂದ ಇಲಾಖೆಗೆ ವಾರ್ಷಿಕ ಅಂದಾಜು `700 ಕೋಟಿ ಹೊರೆ ಬೀಳುತ್ತದೆ. ಒಂದು ವೇಳೆ ಈ ಹೊರೆ ಇರದಿದ್ದರೆ ಎಲ್ಲ ಸಾರಿಗೆ ಸಂಸ್ಥೆಗಳು ಲಾಭದಲ್ಲಿಯೇ ಕಾರ್ಯನಿರ್ವಹಿಸುತ್ತವೆ’ ಎಂದು ಹೇಳಿದರು.
‘ಈ ವರ್ಷ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 750 ಹೊಸ ಬಸ್ಗಳನ್ನು ಒದಗಿಸಲಾಗುವುದು. ಆದರೆ, ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಬಳಕೆ ಮಾಡಿ, ಹಳೆಯದಾಗಿರುವ ಬಸ್ಗಳನ್ನು ಒದಗಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 543 ತಾಂತ್ರಿಕ ಹುದ್ದೆ ಸೇರಿದಂತೆ ಒಟ್ಟು 782 ಹುದ್ದೆಗಳು ಖಾಲಿ ಇವೆ. ಇದೇ ವರ್ಷದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದೂ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ‘ನಷ್ಟದಲ್ಲಿರುವ ವಾಯವ್ಯ ಸಾರಿಗೆ ಸಂಸ್ಥೆಗೆ `50 ಕೋಟಿ ವಿಶೇಷ ಅನುದಾನ ನೀಡಲು ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಈಗಿರುವ ಸರ್ಕಾರ ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ರಿಯಾಯಿತಿ ಬಸ್ಪಾಸ್ಗಳನ್ನು ವಿತರಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ವಾಯವ್ಯ ಸಾರಿಗೆಗೆ ಅಂದಾಜು `150 ಕೋಟಿ ಮರುಪಾವತಿಯಾಗಬೇಕಿದೆ. ಹಣಕಾಸು ಇಲಾಖೆ ಮೇಲೆ ಒತ್ತಡ ಹೇರಿ ಈ ಹಣವನ್ನು ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
‘ಸಮನ್ವಯದ ಕೊರತೆಯಿಂದಾಗಿ ಬಿಆರ್ಟಿಎಸ್ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಬಗ್ಗೆ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಪ್ರಹ್ಲಾದ ಜೋಶಿ ಮನವಿ ಮಾಡಿದರು.
‘ಸಿಬಿಟಿ ನೂತನ ಕಟ್ಟಡಕ್ಕೆ ಇದು ಎರಡನೇ ಬಾರಿ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಪರಿಷ್ಕೃತ ಯೋಜನೆ ಎನ್ನಲಾಗುತ್ತಿದೆ. ಹೀಗಾಗಿ ಕಾಮಗಾರಿ ಶೀಘ್ರವೇ ಪ್ರಾರಂಭಗೊಂಡು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು’ ಎಂದೂ ಹೇಳಿದರು.
‘ಬಿಆರ್ಟಿಎಸ್ ಕುರಿತಂತೆ ಚರ್ಚಿಸಲು ವಿಶೇಷ ಸಭೆಯನ್ನು ಕರೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮನವಿ ಮಾಡಿದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಎಚ್.ಎಚ್.ಕೋನರಡ್ಡಿ ಮಾತನಾಡಿದರು. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಗೋಯಲ್ ಚೌಧರಿ, ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ ಮತ್ತಿತರರು ವೇದಿಕೆ ಮೇಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.