ಧಾರವಾಡ: ‘ಹಿಂದಿನ ಕಾಲದಲ್ಲಿ ಕವಿಗಳು ರಚಿಸಿದ ಕಾವ್ಯಗಳು ಜನಸಾಮಾನ್ಯರನ್ನು ತಲುಪುತ್ತಿದ್ದವು. ಆದರೆ, ಇಂದು ಅವು ಜನರನ್ನು ತಲುಪುತ್ತಿಲ್ಲ. ಆಧುನಿಕ ಕನ್ನಡ ಕಾವ್ಯ ಭಾಷೆಯ ಅರಿವು ಜನಸಾಮಾನ್ಯರಿಗೆ ಅಗತ್ಯವಾಗಿದೆ’ ಎಂದು ಡಾ.ಪ್ರಹ್ಲಾದ ಅಗಸನಕಟ್ಟೆ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನವೀನ ಚಂದ್ರ ಪ್ರಕಾಶನವು ಈಚೆಗೆ ಹಮ್ಮಿಕೊಂಡಿದ್ದ, ಡಿ.ಬಿ.ಢಂಗ ರಚಿಸಿದ ಅರ್ಥ–ಅನರ್ಥ ಎಂಬ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು. ‘ತಮ್ಮ ಕವನ ಸಂಕಲನಗಳನ್ನು ಸಾಮಾನ್ಯ ಜನ ಕೊಳ್ಳದೇ ಇರುವುದರಿಂದ ಇಂದಿನ ಅನೇಕ ಕವಿಗಳು ಕಾವ್ಯ ಪ್ರಕಾರವನ್ನು ಬಿಟ್ಟು ಬೇರೆ ಗದ್ಯ ಪ್ರಕಾರದ ರಚನೆಯಲ್ಲಿ ತೊಡಗಿದ್ದಾರೆ.
ಇನ್ನೂ ಕೆಲವರು ತಮ್ಮ ಆತ್ಮ ಸಂತೋಷಕ್ಕಾಗಿ ಅಥವಾ ತಮ್ಮಂಥ ಕವಿಗಳಿಗೋಸ್ಕರ ಕವನ ರಚಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಡಿ.ಬಿ.ಢಂಗ ತಮ್ಮ ಕಾವ್ಯ ಪ್ರಕಾರವನ್ನು ಕಳೆದ ಸುಮಾರು ಮೂರು ದಶಕಗಳ ಹಿಂದಿನಿಂದಲೂ ಮುಂದುವರಿಸಿಕೊಂಡು ಬಂದದ್ದು ವಿಶೇಷ’ ಎಂದರು.
ಕೃತಿ ಬಿಡುಗಡೆ ಮಾಡಿದ ಡಾ.ಬಸು ಬೇವಿನಗಿಡದ, ‘ಅರ್ಥ–ಅನರ್ಥ ಎಂದರೆ ಕೇವಲ ಶಬ್ದಾರ್ಥ ಮಾತ್ರವಲ್ಲದೇ ಬದುಕಿನ ಒಳ್ಳೆಯದು–ಕೆಟ್ಟದ್ದು, ಸತ್ಯ–ಅಸತ್ಯ, ಶಬ್ದ–ಅಶಬ್ದ ಹೀಗೆ ಅನೇಕ ರೀತಿಯ ಅರ್ಥಗಳನ್ನು ಡಿ.ಬಿ.ಢಂಗ ಅವರ ಕಾವ್ಯದಲ್ಲಿ ಕಲ್ಪಿಸುತ್ತಾ ಹೋಗಬಹುದು’ ಎಂದರು. ಪ್ರೊ.ಬಸವರಾಜ ಒಕ್ಕುಂದ ಕೃತಿ ಕುರಿತು ಮಾತನಾಡಿದರು. ಕವಿ ಡಿ.ಬಿ,ಢಂಗ ತಮ್ಮ ಅನಿಸಿಕೆ ಹಂಚಿಕೊಂಡರು. ಎಂ.ಎಂ.ಪುರದನಗೌಡರ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.