ADVERTISEMENT

‘ಟಿಪ್ಪು ಮುಸ್ಲಿಮರಿಗಷ್ಟೇ ಸೀಮಿತನಲ್ಲ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 8:44 IST
Last Updated 3 ಡಿಸೆಂಬರ್ 2013, 8:44 IST

ಅಣ್ಣಿಗೇರಿ: ‘ಟಿಪ್ಪು ಸುಲ್ತಾನ್, ಅಂಬೇಡ್ಕರ, ಶಿವಾಜಿ, ವಾಲ್ಮೀಕಿ, ಕನಕದಾಸ, ಕಿತ್ತೂರು ಚೆನ್ನಮ್ಮ, ಬಸವಣ್ಣನವರು ಆಯಾ ಜಾತಿ– ಧರ್ಮಕ್ಕೆ ಸೀಮಿತರಲ್ಲ. ಈ ಪುಣ್ಯ ಪುರುಷರ ಜಯಂತಿಯನ್ನು ಎಲ್ಲ ಜಾತಿ– ಧರ್ಮದವರು ಕೂಡಿ ಆಚರಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಸ್ಥಳೀಯ ಅಂಜುಮನ್ ಸಂಸ್ಥೆಯು ಶಾದಿ ಮಹಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ಇಂತಹ ಮಹನೀಯರ ಜಯಂತ್ಯುತ್ಸವದಂದು ಘೋಷಿಸಲಾಗುವ ರಜಾ ದಿನಗಳಂದು ಸರ್ಕಾರಿ ನೌಕರರು, ಅಧಿಕಾರಿಗಳು ಮಜಾ ದಿನವೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಜೆ ಕೊಡದೆ ಜಯಂತಿಗಳನ್ನು ಆಚರಿಸುವ ಕುರಿತು ಗಂಭೀರ ಚಿಂತನೆ ನಡೆಯಬೇಕಾಗಿದೆ’ ಎಂದರು.

‘ದೇಶ– ರಾಜ್ಯಕ್ಕೆ ಹಲವಾರು ಹೊಸ ಕೊಡುಗೆಗಳನ್ನು ಕೊಟ್ಟ ಮೊದಲಿಗ ಟಿಪ್ಪು ಸುಲ್ತಾನ. ಆತ ಸರ್ವ ಧರ್ಮ, ಭಾಷೆಗಳ ಸಹಿಷ್ಣು ಆಗಿದ್ದ’ ಎಂದು ಉಪನ್ಯಾಸ ನೀಡಿದ ಮಹಮ್ಮದ ರಫೀಕ್ ಫತೆಅಲೀಖಾನವರ ಹೇಳಿದರು. ಎಸ್.ಎಸ್. ಹೊನ್ನಾಪುರ ಟಿಪ್ಪು ಸುಲ್ತಾನನ ದೇಶಾಭಿಮಾನವನ್ನು ಕೊಂಡಾಡಿದರು.

ಶಾಸಕ ಹಾಗೂ ಪುರಸಭೆ ಸದಸ್ಯರಿಗೆ ಸನ್ಮಾನಿಸಲಾಯಿತು. ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಕಮಲಾಪುರ ಪೀರಾ ದಾದಾಪೀರ ಖಾದ್ರಿ ಸಾನಿಧ್ಯ ವಹಿಸಿದ್ದರು. ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಕ್ರೆಡೆಲ್ ಮಾಜಿ ಅಧ್ಯಕ್ಷ ಷಣ್ಮುಖಪ್ಪ ಗುರಿಕಾರ, ಮಹ್ಮದ್ ಅಶ್ರಫ್ ಅಶ್ರಫಿ, ಇಬ್ರಾಹೀಂಸಾಬ್ ಖತೀಬ್, ಮಹ್ಮದ ಶಫಿ ಕಾಜಿ, ಸಂಗಪ್ಪ ಹರ್ಲಾಪುರ, ದ್ಯಾಮಪ್ಪ ಕೊಗ್ಗಿ, ಇಮಾಹುಸೇನ ಸಮುದ್ರಿ, ಎಸ್.ಎಸ್.ಪಡೋಲಕರ ಉಪಸ್ಥಿತರಿದ್ದರು.

ಅಂಜುಮನ್ ಅಧ್ಯಕ್ಷ ಬುಡ್ಡೇಶರೀಫ ನದ್ದಿಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಖಾದರಸಾಬ ಮುಳಗುಂದ ಸ್ವಾಗತಿಸಿದರು. ಜಂಗ್ಲಿಸಾಬ್ ಅಗಸಿಬಾಗಿಲ ವಂದಿಸಿದರು. ಇಮಾಮಹುಸೇನ ಕೊಡ್ಲವಾಡ ನಿರೂಪಿಸಿದರು. ಸಮಾರಂಭಕ್ಕೂ ಮೊದಲು ಟಿಪ್ಪು ಸುಲ್ತಾನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.