ADVERTISEMENT

‘ಧರ್ಮ ಪರಿಪಾಲನೆಯಿಂದ ಶಾಂತಿ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 7:24 IST
Last Updated 11 ಸೆಪ್ಟೆಂಬರ್ 2013, 7:24 IST

ಹುಬ್ಬಳ್ಳಿ: ‘ಧರ್ಮದಲ್ಲಿ ಅದ್ಭುತ ಶಕ್ತಿಯಿದೆ. ಧರ್ಮ ಜೀವನ ವಿಧಾನ ನಿರೂಪಿಸುತ್ತದೆ. ಸತ್ಯ ಮತ್ತು ಶಾಂತಿ ಧರ್ಮದ ಎರಡು ಕಣ್ಣು. ಜೀವನದ ಉನ್ನತಿಗೆ ಮತ್ತು ನೆಮ್ಮದಿಯ ಬದುಕಿಗೆ ಧರ್ಮಪರಿಪಾಲನೆ ಅಗತ್ಯ. ಧರ್ಮಾ­ಚರಣೆಯಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯ’  ಎಂದು  ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಸ್ವಾಮೀಜಿ  ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ಪುರಾಣಮಂಗಲ ಮತ್ತು ಶ್ರೀಗುರು­ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ­ದರು. ‘ಆದರ್ಶ ಸಮಾಜ ನಿರ್ಮಾಣಕ್ಕೆ ಧರ್ಮದ ನೀತಿಸಂಹಿತೆ ಅತ್ಯಂತ ಅಗತ್ಯ. ನೀತಿಧರ್ಮಗಳು ನಮ್ಮನ್ನು ಬಂಧಿಸು­ವುದಿಲ್ಲ ರಕ್ಷಿಸುತ್ತವೆ ಎಂಬುದನ್ನು ಯಾರೂ ಮರೆಯಬಾರದು. ವೈಚಾರಿಕತೆಯ ದಬ್ಬಾಳಿಕೆ, ಧರ್ಮ ಸಂಸ್ಕೃತಿ ಮತ್ತು ಪರಂಪರೆಗಳ ಬಗೆಗೆ ದುಚ್ಪರಿಣಾಮ ಬೀರುತ್ತಿರುವ ಇಂದಿನ ಸಂದರ್ಭದಲ್ಲಿ ಎಲ್ಲರೂ ಜಾಗತಗೊಳ್ಳಬೇಕಾಗಿದೆ’ ಎಂದರು.

ಕಲಾದಗಿಯ ಚಂದ್ರಶೇಖರ ಶಿವಾ­ಚಾ­ರ್ಯರು, ಶಿರಕೋಳದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು, ಹೂಲಿಯ ಸಾಂಬಯ್ಯಜ್ಜ, ಜಕ್ಕಲಿಯ ವಿಶ್ವಾರಾಧ್ಯ ಶಿವಾಚಾರ್ಯ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ, ಚನ್ನಗಿರಿ, ಹಾರನಹಳ್ಳಿ ಮತ್ತು ದೊಡ್ಡವಾಡ ಶ್ರೀಗಳು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ ದ್ಯಾಮಕ್ಕನವರ, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಕಾಡಯ್ಯ ಹಿರೇಮಠ, ಮಲ್ಲಿ­ಕಾರ್ಜುನ ಅಸುಂಡಿ, ಸಿದ್­ರಾಮಯ್ಯ ಹಿರೇಮಠ, ಅರ್ಜುನಪ್ಪ ಮೆಣಸಿನಕಾಯಿ, ಸಿದ್ರಾಮಪ್ಪ ಗೌರಿ, ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.

ಅಡ್ಡಪಲ್ಲಕ್ಕಿ ಮಹೋತ್ಸವ: ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ರಂಭಾಪುರೀ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವದೊಂದಿಗೆ ಕಳಸ ಕನ್ನಡಿ, ಪೂರ್ಣ ಕುಂಭಗಳೊಂದಿಗೆ ಸುಳ್ಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.

ಸ್ವಸಹಾಯ ಸಂಘದವರು, ಮಹಿಳಾ ಡೊಳ್ಳು ಸಮಿತಿಯವರು, ಭಜನಾ ಸಂಘದವರು, ಜಾಂಝ ಪಥಕ ತಂಡದವರು ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.