ADVERTISEMENT

282 ಕೋಟಿ ರೂ. ಪ್ರೀಮಿಯಂ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 8:00 IST
Last Updated 3 ಸೆಪ್ಟೆಂಬರ್ 2011, 8:00 IST

ಧಾರವಾಡ: “ಭಾರತೀಯ ಜೀವ ವಿಮಾ ನಿಗಮದ ಧಾರವಾಡ ವಿಭಾಗ 2010-11ನೇ ಆರ್ಥಿಕ ವರ್ಷದಲ್ಲಿ 3.67 ಲಕ್ಷ ಪಾಲಿಸಿ ಮಾರಾಟ ಮಾಡುವುದರ ಜೊತೆಗೆ 282 ಕೋಟಿ ರೂಪಾಯಿ ಪ್ರೀಮಿಯಂ ಹಣ ಸಂಗ್ರಹಿಸಿದೆ” ಎಂದು ಹಿರಿಯ ವಿಭಾಗೀಯ ವ್ಯವಸ್ಥಾಪಕ ವಿವೇಕ ಮೊಹರಿಲ್ ಹೇಳಿದರು.

ಶುಕ್ರವಾರ ವಿಮಾ ಸಪ್ತಾಹದ ಉದ್ಘಾಟನೆ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಮೂಹ ಮತ್ತು ಸಾಮಾಜಿಕ ಭದ್ರತಾ ವಿಮೆಯಡಿ 1.5 ಲಕ್ಷ ಪಾಲಿಸಿಗಳನ್ನು ಮಾರಾಟ ಮಾಡಿದೆ ಎಂದರು.
ಧಾರವಾಡ ವಿಭಾಗ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ 15 ಶಾಖೆಗಳು ಹಾಗೂ 13 ಸಂಪರ್ಕ (ಸೆಟ್‌ಲೈಟ್) ಶಾಖೆಗಳನ್ನು ಹೊಂದಿದೆ. 12000ಕ್ಕೂ ಅಧಿಕ ಪ್ರತಿನಿಧಿಗಳು ಹಾಗೂ 1000 ಸಿಬ್ಬಂದಿ ಮೂಲಕ 25 ಲಕ್ಷ ಪಾಲಿಸಿದಾರರಿಗೆ ಸೇವೆ ನೀಡುತ್ತಿದೆ. 2010-11ನೇ ಸಾಲಿನಲ್ಲಿ 1,12,604 ಕ್ಲೇಮ್‌ಗಳ ಮೂಲಕ 324.11 ಕೋಟಿ ರೂ. ಸಂದಾಯ ಮಾಡಿದೆ ಎಂದು ವಿವರಿಸಿದರು.

ಭಾರತೀಯ ಜೀವ ವಿಮಾ ನಿಮಗವು ಜೀವ ವಿಮಾ ಮಾರುಕಟ್ಟೆಯಲ್ಲಿ ಉಳಿದೆಲ್ಲ ಕಂಪೆನಿಗಳಿಗಿಂತ ಮುಂದಿದ್ದು, ಶೇ. 78 ರಷ್ಟು ಪಾಲಿಸಿ ಹಾಗೂ ಶೇ. 72 ರಷ್ಟು ಪ್ರೀಮಿಯಂ ಪಾಲು ಪಡೆದಿದೆ. ಕಳೆದ ಆರ್ಥಿಕ ವರ್ಷದಲ್ಲಿ ನಿಗಮ 3.7 ಕೋಟಿ ಹೊಸ ಪಾಲಿಸಿಗಳ ಮೂಲಕ 86,444 ಕೋಟಿ ರೂಪಾಯಿ ಪ್ರೀಮಿಯಂ ಆದಾಯ ಗಳಿಸಿದೆ ಎಂದರು.

ಸಪ್ತಾಹಕ್ಕೆ ಚಾಲನೆ
ಶುಕ್ರವಾರ ವಿಭಾಗೀಯ ಕಚೇರಿಯಲ್ಲಿ ವಿಮಾ ಸಪ್ತಾಹಕ್ಕೆ ಪಾಲಿಸಿದಾರ ವೆಂಕಟೇಶ ಪಾಂಡುರಂಗಿ ಚಾಲನೆ ನೀಡಿದರು. ವಿವೇಕ ಮೊಹರಿಲ್ ಮಾತನಾಡಿ, ನಿಗಮದ ಸಾಧನೆ ಹಾಗೂ ಕೊಡುಗೆಯನ್ನು ವಿವರಿಸಿದರು.
ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬಿ.ಸಿ.ಮುಕ್ತಾಮಠ, ಶಂಕರ ಕುಂಬಿ ಉಪಸ್ಥಿತರಿದ್ದರು.

ಮಾರುಕಟ್ಟೆ ವ್ಯವಸ್ಥಾಪಕ ಜೆ.ಜಗದೀಶ ಸ್ವಾಗತಿಸಿದರು. ಸರಸ್ವತಿ ಉಡುಪ ಹಾಗೂ ಶ್ಯಾಮ ಎಮಕನಮರಡಿ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಹಕ ಸಂಪರ್ಕ ವ್ಯವಸ್ಥಾಪಕ ಎನ್.ಭೀಮಪ್ಪ ಪಾಲಿಸಿ ಸೇವೆಯ ಬಗ್ಗೆ ಮಾಹಿತಿ ನೀಡಿದರು. ಮಾರಾಟ ವ್ಯವಸ್ಥಾಪಕ ಎಂ.ಸುಬ್ರಮಣ್ಯನ್ ವಂದಿಸಿದರು. ಅಶೋಕ ಬೊಂಗಾಳೆ ನಿರೂಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.