ADVERTISEMENT

ಓಣಿಯ ಕೊಳಚೆ ಸ್ವಚ್ಛಗೊಳಿಸಿದ ಮುಷ್ತಾಕ್‌

ಮದುವೆ ವಾರ್ಷಿಕೋತ್ಸವದ ದಿನವೇ ‘ಸ್ವಚ್ಛಭಾರತ’ ಮಂತ್ರ

ಅಶೋಕ ಘೋರ್ಪಡೆ
Published 14 ಜನವರಿ 2018, 7:07 IST
Last Updated 14 ಜನವರಿ 2018, 7:07 IST
ಕುಂದಗೋಳ ತಾಲ್ಲೂಕಿನ ಬಿಳೇಬಾಳ ಗ್ರಾಮದಲ್ಲಿ 16ನೇ ಮದುವೆ ವಾರ್ಷಿಕೋತ್ಸವದ ಅಂಗವಾಗಿ ತಮ್ಮ ಓಣಿಯ ಕೊಳಚೆಯನ್ನು ಸ್ವಚ್ಛಗೊಳಿಸಿದ ಮುಷ್ತಾಕ್‌ ಕಿಲ್ಲೇದಾರ
ಕುಂದಗೋಳ ತಾಲ್ಲೂಕಿನ ಬಿಳೇಬಾಳ ಗ್ರಾಮದಲ್ಲಿ 16ನೇ ಮದುವೆ ವಾರ್ಷಿಕೋತ್ಸವದ ಅಂಗವಾಗಿ ತಮ್ಮ ಓಣಿಯ ಕೊಳಚೆಯನ್ನು ಸ್ವಚ್ಛಗೊಳಿಸಿದ ಮುಷ್ತಾಕ್‌ ಕಿಲ್ಲೇದಾರ   

ಕುಂದಗೋಳ: ತಾಲ್ಲೂಕಿನ ದೇವನೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ ಬಿಳೇಬಾಳ ಗ್ರಾಮದ ಯುವಕ ಮದುವೆ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮದಲ್ಲಿದ್ದ ಕೊಳಚೆಯನ್ನು ತನ್ನ ಸಹಾಯಕನೊಂದಿಗೆ ಎತ್ತಿ ಹಾಕಿ ಸ್ವಚ್ಛಗೊಳಿಸಿದ್ದಾರೆ.

ವೃತ್ತಿಯಲ್ಲಿ ಪೋಟೊಗ್ರಾಫರ್ ಆಗಿರುವ ಬಡಕುಟುಂಬದ ಮುಷ್ತಾಕಸಾಬ್ ಹೈದರಸಾಬ್ ಕಿಲ್ಲೇದಾರ 2002ರಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯ ಆಯೇಷಾರನ್ನು ಕೈಹಿಡಿದು 16 ವರ್ಷಗಳು ತುಂಬಿದವು. ಈ ದಂಪತಿಗೆ ಹೆಣ್ಣು ಮತ್ತು ಗಂಡು ಮಗುವಿದೆ. ಕೇವಲ 1500 ಜನಸಂಖ್ಯೆ ಹೊಂದಿರುವ ಈ ಪುಟ್ಟ ಗ್ರಾಮದಲ್ಲಿ ಅಲ್ಪಸಂಖ್ಯಾತ (ಕಿಲ್ಲೇದಾರ) ಕೋಮಿನವರು ಹೆಚ್ಚಿದ್ದಾರೆ. ಮುಷ್ತಾಕಸಾಬ್ ಈ ಗ್ರಾಮದಲ್ಲಿ ಅಷ್ಟೇ ಅಲ್ಲದೇ, ಪಕ್ಕದ ದೇವನೂರ, ಕಮಡೊಳ್ಳಿ ಗ್ರಾಮಗಳಲ್ಲಿಯೂ ವೃತ್ತಿಗೆ ಹೋದಾಗ ಬಡವರಿಗೆ ಸಹಾಯ ಗುಣವನ್ನು ಹೊಂದಿದ್ದಾರೆ. ಪೋಟೊಗ್ರಾಫರ್‌ ವೃತ್ತಿ ಮಾಡುತ್ತಾ ಸಂಕಷ್ಟದಲ್ಲಿರುವ ಬಡವರಿಗೆ ಸಂಧ್ಯಾ ಸುರಕ್ಷೆ, ವಿಧವಾ ವೇತನ, ಅಂಗವಿಕಲರಿಗೆ ತಿಂಗಳ ಮಾಸಾಶನ ಸೇರಿದಂತೆ ವಿವಿಧ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ.

ಮುಸ್ತಾಕಸಾಬ್ ಮದುವೆ ಆಗಿ 16ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿದ್ದು ಇದಕ್ಕಾಗಿ ಏನಾದರೊಂದು ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂಬ ಹಂಬಲ ಉಂಟಾಯಿತು. ಇದಕ್ಕಾಗಿ ಗ್ರಾಮದಲ್ಲಿರುವ ಓಣಿಯ ರಸ್ತೆಯ ಮಧ್ಯೆ ಇರುವ ಕೊಳಚೆಯನ್ನು ಇತ್ತೀಚೆಗೆ ಸ್ವಚ್ಛತೆಗೊಳಿಸಿದರು.

ADVERTISEMENT

ಅಂದು ಓಣಿಯ ತನ್ನ ಆಪ್ತ ಗೆಳೆಯ ನಿಂಗಪ್ಪ ಚಲವಾದಿ ಅವರಿಗೆ ಒಂದು ದಿನದ ಕೂಲಿ ಹಣವನ್ನು ಕೊಟ್ಟು ಗ್ರಾಮದ 1ನೇ ವಾರ್ಡ್‌ ರಸ್ತೆಯ ಮಧ್ಯದಲ್ಲಿರುವ ಕೊಳಚೆಯನ್ನು ಸ್ವಚ್ಛಗೊಳಿಸಿ ಪ್ರಧಾನ ಮಂತ್ರಿ ಸ್ವಚ್ಛ ಭಾರತ ಮಿಷನ್ ನಿರ್ಮಾಣಕ್ಕೆ ಸಾಥ್ ನೀಡಿದರು.

ಪ್ರತಿಯೊಬ್ಬರೂ ಮುಷ್ತಾಕಸಾಬ್ ಅವರಂತೆ ಮನಸ್ಸು ಮಾಡಿ ಇಂತಹ ಸಾಮಾಜಿಕ ಸೇವೆಗಳನ್ನು ಮಾಡಲು ಮುಂದಾದಾಗ ಮಾತ್ರ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಆಗಲು ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.