ಧಾರವಾಡ: ‘ಬೆಳವಡಿ ಮಲ್ಲಮ್ಮ ಅವರು ಶೌರ್ಯದಿಂದ ಹೋರಾಡಿ ಛತ್ರಪತಿ ಶಿವಾಜಿ ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರಿಬ್ಬರ ಸಹೋದರತ್ವದ ಸಂಕೇತವಾಗಿ ಯಾದವಾಡ ಗ್ರಾಮದಲ್ಲಿ ರಾಣಿ ಬೆಳವಡಿ ಮಲ್ಲಮ್ಮ ಸ್ಥಾಪಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ಶಿಲ್ಪವನ್ನು ಸಂರಕ್ಷಿಸಿ, ಗ್ರಾಮದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ಇತಿಹಾಸ ತಜ್ಞರು, ಅಖಿಲ ಭಾರತ ಮರಾಠಾ ಮಂಡಳದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಶನಿವಾರ ಶಿವಾಜಿ ಸ್ಮಾರಕ ಪರಿಶೀಲಿಸಿ ಅವರು ಮಾತನಾಡಿದರು.
‘ಬೆಳವಡಿ ಮಲ್ಲಮ್ಮ ಈ ಭಾಗದ ಪ್ರಮುಖ ಅರಸು ಮನೆತನದ ರಾಣಿಯಾಗಿದ್ದರು. ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ದಂಡಯಾತ್ರೆ ಮಾಡಿ, ಬೆಳವಡಿಯನ್ನು ವಶಪಡಿಸಿಕೊಳ್ಳಲು ಯುದ್ಧ ಸಾರಿದ್ದರು. ಆ ಸಂದರ್ಭದಲ್ಲಿ ಧೈರ್ಯದಿಂದ ಅವರ ಸೇನೆಯನ್ನು ಹಿಮ್ಮೆಟ್ಟಿಸಿದ ಬೆಳವಡಿ ಮಲ್ಲಮ್ಮಳನ್ನು ಕಾಣಲು ಸ್ವತಃ ಶಿವಾಜಿ ಮಹಾರಾಜರು ಆಗಮಿಸಿದ್ದರು. ಅವರ ಸವಿನೆನಪಿಗಾಗಿ ರಾಣಿ ಮಲ್ಲಮ್ಮ ಹಾಗೂ ಅವರ ಪತಿ ಈಶಪ್ರಭು ದೇಸಾಯಿ ಅವರು ಶಿವಾಜಿ ಸ್ಮಾರಕವನ್ನು ತನ್ನ ರಾಜ್ಯದ ಗಡಿಗ್ರಾಮ ಯಾದವಾಡದಲ್ಲಿ ಸ್ಥಾಪಿಸಿದರು’ ಎಂದು ಇತಿಹಾಸ ಸ್ಮರಿಸಿದರು.
‘ಇಂತಹ ಐತಿಹಾಸಿಕ ಮಹತ್ವದ ಸ್ಮಾರಕ ನಮ್ಮ ನಿರ್ಲಕ್ಷ್ಯದಿಂದಾಗಿ ಬೆಳಕಿಗೆ ಬಂದಿಲ್ಲ. ಇದರ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಯುವಂತೆ ಮತ್ತು ಸರಿಯಾದ ಇತಿಹಾಸವನ್ನು ದಾಖಲಿಸುವ ಉದ್ದೇಶದಿಂದ ಶಿವಾಜಿ ಅವರ ಹೆಸರಿನಲ್ಲಿ ಶಾಸಕರ ಅಭಿವೃದ್ಧಿ ಅನುದಾನದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸ್ಮಾರಕವನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು.
‘ತಜ್ಞರ ಸಲಹೆಯಂತೆ ಕಲ್ಲಿನ ಕಟ್ಟಡದಲ್ಲಿ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯ ರೂಪಿಸಲಾಗುತ್ತದೆ. ಶಿವಾಜಿ ಸ್ಮಾರಕ ಸೇರಿದಂತೆ ಯಾದವಾಡ ಗ್ರಾಮದಲ್ಲಿ ದೊರೆತಿರುವ ಎಲ್ಲ ವೀರಗಲ್ಲು, ಮಾಸ್ತಿಗಲ್ಲುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಇಡಲಾಗುವುದು’ ಎಂದರು.
ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನದ ಮಾಜಿ ಅಧ್ಯಕ್ಷ ಗುಲಾಬರಾವ್ ಘೋರ್ಪಡೆ, ಇತಿಹಾಸ ತಜ್ಞ ವಸಂತ ಮುಳಿಕ, ಯಾದವಾಡ ಗ್ರಾಮದ ಮುಖಂಡರಾದ ಮಡಿವಾಳಪ್ಪ ದಿಂಡಲಕೊಪ್ಪ, ರಾಚಯ್ಯ ಹಳ್ಳಿಗೇರಿಮಠ, ಗುಳಪ್ಪ ಬೆಂಡಿಗೇರಿ, ಮಡಿವಾಳಪ್ಪ ಕುಸುಗಲ್ಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.