ADVERTISEMENT

ಸವಾಲು ಎದುರಿಸಲು ಕಾರ್ಮಿಕರು ಸನ್ನದ್ಧರಾಗಬೇಕು: ಕೆ. ಮಹಾಂತೇಶ ಕರೆ

ಸಿಐಟಿಯು 50ನೇ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2019, 13:59 IST
Last Updated 31 ಮೇ 2019, 13:59 IST
ಸಿಐಟಿಯು ಜಿಲ್ಲಾ ಸಮಿತಿ ಏರ್ಪಡಿಸಿದ್ದ ಭಾರತ ಕಾರ್ಮಿಕ ಚಳವಳಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಐಟಿಯು ಸುವರ್ಣ ಮಹೋತ್ಸವ ಲಾಂಭನ ಬಿಡುಗಡೆ ಮಾಡಲಾಯಿತು–
ಸಿಐಟಿಯು ಜಿಲ್ಲಾ ಸಮಿತಿ ಏರ್ಪಡಿಸಿದ್ದ ಭಾರತ ಕಾರ್ಮಿಕ ಚಳವಳಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಐಟಿಯು ಸುವರ್ಣ ಮಹೋತ್ಸವ ಲಾಂಭನ ಬಿಡುಗಡೆ ಮಾಡಲಾಯಿತು–   

ಹುಬ್ಬಳ್ಳಿ: ಕಾರ್ಮಿಕ ವರ್ಗ ಈಗ ಪಡೆಯುತ್ತಿರುವ ಅಲ್ಪ ಸ್ವಲ್ಪ ಸೌಲಭ್ಯಗಳ ಹಿಂದೆ ಹೋರಾಟ, ತ್ಯಾಗ ಬಲಿದಾನದ ಕಥನವಿದೆ. ಕಾರ್ಮಿಕ ವರ್ಗ ಇದನ್ನು ಅರ್ಥ ಮಾಡಿಕೊಂಡು ಸಮಕಾಲೀನ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಹೇಳಿದರು.

ಸಿಐಟಿಯು ಜಿಲ್ಲಾ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಭಾರತ ಕಾರ್ಮಿಕ ಚಳವಳಿಯ ಶತಮಾನೋತ್ಸವ ಮತ್ತು ಸಿಐಟಿಯು 50ನೇ ಸಂಸ್ಥಾಪನಾ ದಿನಾಚರಣೆ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಹಾಗೂ ಭೂ ಮಾಲೀಕರು ನಡೆಸಿದ ಶೋಷಣೆ ಮತ್ತು ದಬ್ಬಾಳಿಕೆಗಳ ವಿರುದ್ಧ ಹೋರಾಡುತ್ತಲೇ ಸ್ವಾತಂತ್ರ್ಯ ಚಳವಳಿಗಾಗಿ ಅಪಾರವಾದ ತ್ಯಾಗ ಬಲಿದಾನಗಳನ್ನು ಕಾರ್ಮಿಕ ವರ್ಗ ಮಾಡಿದೆ. ಇಂತಹ ಇತಿಹಾಸದ ಅಧ್ಯಯನ ಹಾಗೂ ಸ್ಫೂರ್ತಿ ಮಾತ್ರವೇ ಸವಾಲುಗಳನ್ನು ಎದುರಿಸಲು ಸಹಾಯವಾಗಬಲ್ಲವು. ಹೀಗಾಗಿ ಚರಿತ್ರೆಯ ಈ ಅಂಶಗಳನ್ನು ಕಾರ್ಮಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ಸೊಪ್ಪಿನ ಮಾತನಾಡಿ, ಇವತ್ತಿನ ದಿನಮಾನದಲ್ಲಿ ದುಡಿಯುವ ವರ್ಗದ ಮೇಲೆ ಆಳುವ ಸರ್ಕಾರಗಳು ನಡೆಸುತ್ತಿರುವ ಶೋಷಣೆಯ ವಿಧಾನಗಳು ಮೇಲ್ನೋಟಕ್ಕೆ ಗೋಚರಿಸಿದೆ ಅಗೋಚರವಾಗಿವೆ. ಕಾರ್ಮಿಕರು ಸಂಘಟಿತರಾಗುವ ಮೂಲಕ ಅದರ ಆಳ ಅಗಲವನ್ನು ತಿಳಿದುಕೊಳ್ಳಬೇಕು ಎಂದರು.

ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್.ಪೂಜಾರಿ, ಕಳೆದ ಐದು ವರ್ಷಗಳಿಂದ ಕಾರ್ಮಿಕ ವರ್ಗ ಯಾವ ಕಾರ್ಪೋರೇಟ್ ನೀತಿಗಳು ಬದಲಾಗಬೇಕೆಂದು ಸತತ ಹೋರಾಟ ನಡೆಸಿತೋ ಅದೇ ನೀತಿಗಳನ್ನು ಚುನಾವಣೆಯಲ್ಲಿ ಬೆಂಬಲಿಸಿರುವುದು ದುರ್ದೈವದ ಸಂಗತಿ ಎಂದರು.

ಸಿಐಟಿಯು ಸುವರ್ಣ ಮಹೋತ್ಸವ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಬಸವಣ್ಣೆಪ್ಪ ನೀರಲಗಿ, ದುರ್ಗಪ್ಪ ರಾಯಚೂರ, ಕರಿಯಪ್ಪ ದಳವಾಯಿ, ಮಂಜು ಹುಜರಾತಿ, ಎಂ.ಡಿ.ಕತಾಲ, ಹುಸೇನಸಾಬ ನದಾಫ್, ಅಜ್ಮೀರ ಸೊರಟಗೇರಿ, ವೀರೇಶ ಗಡ್ಡದೇವರಮಠ, ಎನ್.ಎಂ.ಪಾಟೀಲ, ಎ.ಎಂ.ಖಾನ ಉಪಸ್ಥಿತರಿದ್ದರು. ಗುರುಸಿದ್ದಪ್ಪ ಅಂಬಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.