ADVERTISEMENT

18 ಮೀ. ಆಳಕ್ಕೆ ಕುಸಿದ ಮಣ್ಣು; ತಪ್ಪಿದ ಅವಘಡ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 16:14 IST
Last Updated 2 ಜುಲೈ 2021, 16:14 IST
ಹುಬ್ಬಳ್ಳಿಯ ಕೋರ್ಟ್ ವೃತ್ತದ ಸಾಯಿ ಮಂದಿರದ ಎದುರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ನಿರ್ಮಾಣ ಹಂತದ ತಡೆಗೋಡೆ ಮೇಲೆ ಮಣ್ಣು ಕುಸಿದು ಬಿದ್ದ ದೃಶ್ಯ
ಹುಬ್ಬಳ್ಳಿಯ ಕೋರ್ಟ್ ವೃತ್ತದ ಸಾಯಿ ಮಂದಿರದ ಎದುರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ನಿರ್ಮಾಣ ಹಂತದ ತಡೆಗೋಡೆ ಮೇಲೆ ಮಣ್ಣು ಕುಸಿದು ಬಿದ್ದ ದೃಶ್ಯ   

ಹುಬ್ಬಳ್ಳಿ: ಕೋರ್ಟ್‌ ವೃತ್ತದ ಸಾಯಿ ಮಂದಿರದ ಎದುರು ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ನಿರ್ಮಾಣ ಹಂತದ ತಡೆಗೋಡೆ ಮೇಲೆ ಗುರುವಾರ ರಾತ್ರಿ 18 ಮೀಟರ್‌ ಎತ್ತರದಿಂದ ಮಣ್ಣು ಕುಸಿದಿದ್ದು, ಅವಘಡವೊಂದು ತಪ್ಪಿದಂತಾಗಿದೆ.

ಮಣ್ಣು ಕುಸಿಯದಂತೆ 50 ಮೀಟರ್‌ ಅಗಲ ಪ್ಲಾಸ್ಟರ್‌ ಮಾಡಲಾಗಿತ್ತು. 30 ಮೀಟರ್‌ ಅಗಲದ ಪ್ಲಾಸ್ಟರ್‌ ಸಮೇತ ಮಣ್ಣು ತಡೆಗೋಡೆ ಮೇಲೆ ಬಿದ್ದಿದೆ. ಮಧ್ಯರಾತ್ರಿ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಶುಕ್ರವಾರ ಬೆಳಿಗ್ಗೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಎಂಜಿನಿಯರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

₹ 50 ಕೋಟಿ ವೆಚ್ಚದ ಬೃಹತ್‌ ಕಾಮಗಾರಿ ಇದಾಗಿದ್ದು, ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಎಂಟು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 18 ಮೀಟರ್‌ ಆಳ ತಗ್ಗು ತೋಡಲಾಗಿದೆ. ಲಾಕ್‌ಡೌನ್‌ ಸಡಿಲಿಕೆಯಾದ ಹಿನ್ನೆಲೆಯಲ್ಲಿ ವಾರದಿಂದ ಈಚೆಗೆ ಕಾಮಗಾರಿ ಚುರುಕು ಪಡೆದುಕೊಂಡಿತ್ತು. ಸುರೇಶ ಎಂಟರ್‌ಪ್ರೈವೇಸಿಸ್ ಲಿಮಿಟೆಡ್‌ ಕಾಮಗಾರಿ ನಿರ್ವಹಿಸುತ್ತಿದೆ.

ADVERTISEMENT

‘ಈ ಹಿಂದೆಯೂ ಎರಡು ಬಾರಿ ಮಣ್ಣು ಕುಸಿದು ಬಿದಿದ್ದು, ಇದೀಗ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಸುತ್ತಲೂ ಬೃಹತ್‌ ಕಟ್ಟಡಗಳಿರುವುದರಿಂದ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಗುರುವಾರ ರಾತ್ರಿ 2ಗಂಟೆ ವೇಳೆ ಮಣ್ಣು ಕುಸಿದಿದೆ. ಹಗಲಿನ ವೇಳೆ ಆಗಿದ್ದರೆ, ಕಾರ್ಮಿಕರ ಪ್ರಾಣಕ್ಕೆ ಅಪಾಯ ಎದುರಾಗುತ್ತಿತ್ತು. ಯಾವ ಸಂದರ್ಭದಲ್ಲಿ ಏನಾಗುತ್ತದೆಯೋ ತಿಳಿಯುತ್ತಿಲ್ಲ. ಈ ಹಿಂದೆಯೂ ಎರಡು ಬಾರಿ ತಡೆಗೋಡೆ ಕುಸಿದು ಬಿದ್ದಿತ್ತು’ ಎಂದು ಅಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರು ತಿಳಿಸಿದರು.

‘ಮಳೆಯಿಂದ ಮಣ್ಣು ಕುಸಿತ’: ‘13 ಮೀಟರ್‌ ಎತ್ತರದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 4.5 ಮೀ. ಮುಕ್ತಾಯವಾಗಿತ್ತು. ಸಡಿಲ ಮಣ್ಣು ಹಾಗೂ ಮಳೆಯಿಂದಾಗಿ ಧರೆ ಕುಸಿದು ತಡೆಗೋಡೆ ಮೇಲೆ ಬಿದ್ದಿದೆ. ತಿಂಗಳೊಳಗೆ ತಡೆಗೋಡೆ ಹಾಗೂ ಮೂರು ಅಂತಸ್ತಿನ ಕಾಮಗಾರಿ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ’ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.