ADVERTISEMENT

ಅನ್ನ, ಜ್ಞಾನ ದಾಸೋಹದ ಶರಣ ದಂಪತಿ

ಉಳವಿ ಯಾತ್ರಾರ್ಥಿಗಳಿಗೆ ‘ವಿಶ್ರಾಂತಿ ಮಂಟಪ’

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 1:50 IST
Last Updated 26 ಫೆಬ್ರುವರಿ 2021, 1:50 IST
ಕಲಘಟಗಿ ಪಟ್ಟಣದ ತಡಸ ಕ್ರಾಸ್ ಹತ್ತಿರ ಕಲಾವಿದ ತಿಪ್ಪಣ್ಣ ಕುರಗುಂದ, ಮಂಜುಳಾ ಶರಣ ದಂಪತಿ ವಿಶ್ರಾಂತಿ ಮಂಟಪದ ಹೊರಗೆ ಹಾಕಿದ ಸ್ವಾಗತ ಫಲಕ
ಕಲಘಟಗಿ ಪಟ್ಟಣದ ತಡಸ ಕ್ರಾಸ್ ಹತ್ತಿರ ಕಲಾವಿದ ತಿಪ್ಪಣ್ಣ ಕುರಗುಂದ, ಮಂಜುಳಾ ಶರಣ ದಂಪತಿ ವಿಶ್ರಾಂತಿ ಮಂಟಪದ ಹೊರಗೆ ಹಾಕಿದ ಸ್ವಾಗತ ಫಲಕ   

ಕಲಘಟಗಿ: 12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ಕ್ರಾಂತಿ ಜರುಗಿದ ಸಂದರ್ಭದಲ್ಲಿ ಸಾವಿರಾರು ಶರಣರು ವಚನ ಸಾಹಿತ್ಯವನ್ನು ಸಮಾಜಕ್ಕೆ ತಿಳಿ ಸಲು ‘ವಚನ ವಾಗ್ಮಿ’ ಹೊತ್ತು ಕಲ್ಯಾಣದಿಂದ ಉಳವಿ ಕಡೆ ಪ್ರಯಾಣ ಬೆಳೆಸಿದರು.

ಹೀಗೆ ಬರುವಾಗ ದಾರಿಯುದ್ದಕ್ಕೂ ಅನೇಕ ಕುರುಹುಗಳನ್ನು ಸ್ಥಾಪಿಸಿದರು. ಧಾರವಾಡದಲ್ಲಿ ಚನ್ನಬಸವಣ್ಣನವರ ದೇವಸ್ಥಾನ, ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠ ಸ್ಥಾಪನೆ ಮಾಡಿ ಮುಂದೆ ಅರಳಿಕಟ್ಟೆ, ಕಲಘಟಗಿ, ತಂಬೂರ, ಜಗಳಬೆಟ್ಟ ಮಾರ್ಗವಾಗಿ ಉಳವಿ ಕ್ಷೇತ್ರ ಪ್ರವೇಶಿ ಸುತ್ತಾರೆ. ಫೆ. 27ರಂದು ಅಲ್ಲಿ ಜಾತ್ರೆ ಜರುಗಲಿದೆ. ಹೀಗಾಗಿ ಈಗ ಪಾದಯಾತ್ರೆ ಹಾಗೂ ವಾಹನಗಳ ಮೂಲಕ ಹೋಗುವವರು ಹೆಚ್ಚು. ಅವರಲ್ಲಿ ಬಹಳಷ್ಟು ಭಕ್ತರು ತಿಪ್ಪಣ್ಣ ಕುರುಗುಂದ ದಾಸೋಹ ಬಸವ ಮಂಟಪದ ಮಹಾದ್ವಾರಕ್ಕೆ ಬರುತ್ತಾರೆ.

ಪಟ್ಟಣದ ಹೊರವಲಯದ ಹುಬ್ಬಳ್ಳಿ–ಕಾರವಾರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಿಪ್ಪಣ್ಣ ಉಳವಪ್ಪ ಕುರುಗುಂದ ಹಾಗೂ ಮಂಜುಳಾ ಶರಣ ದಂಪತಿ ಪದ್ಮಾವತಿ ಆಟೊ ಕೇಂದ್ರದಲ್ಲಿ ಉಳವಿ ಯಾತ್ರಿಕರ ಹಸಿವು ನೀಗಿಸಲು ವಿಶ್ರಾಂತಿ ಮಂಟಪದಲ್ಲಿ 10 ವರ್ಷಗಳಿಂದ ಅನ್ನದಾಸೋಹ ಹಾಗೂ ಅಕ್ಷರ ದಾಸೋಹದ ಕಾಯಕ ಮಾಡುತ್ತಿದ್ದಾರೆ. ಪ್ರತಿ ವರ್ಷ ಒಂದು ತಿಂಗಳು ಅವರು ಈ ಕೆಲಸ ಮಾಡುತ್ತಾರೆ.

ADVERTISEMENT

ಇಲ್ಲಿ ಸಂಚರಿಸುವ ಯಾತ್ರಿಕರಿಗೆ ಬೆಳಿಗ್ಗೆ, ಮಧ್ಯಾಹ್ನ ಆಹಾರ, ಆರೋಗ್ಯದಲ್ಲಿ ಸಮಸ್ಯೆಯಾದರೆ ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಅವಕಾಶವೂ ಇದೆ. ಪ್ರತಿವರ್ಷ ಇಲ್ಲಿ ಐದು ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಬಂದ ಭಕ್ತರಿಗೆ ಶರಣರ ಸಂದೇಶ, ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಜ್ಞಾನ ದಾಸೋಹವನ್ನು ಹಂಚುತ್ತಾರೆ.

ಅನ್ನದಾಸೋಹಿಯಾದ ತಿಪ್ಪಣ್ಣ ಶ್ರೇಷ್ಠ ಕಲಾವಿದರೂ ಹೌದು. ಉಳವಿ ಜಾತ್ರೆಗೆ ಹೆಚ್ಚು ಚಕ್ಕಡಿಗಳೆ ಹೋಗುವುದರಿಂದ ತಮ್ಮ ದಾಸೋಹ ಮಂಟಪದ ಹೊರಗೆ ಜಾತ್ರೆಗೆ ಹೋಗುವ ಭಕ್ತರಿಗೆ ತಾವೇ ತಯಾರಿಸಿದ ಚಕ್ಕಡಿಯಲ್ಲಿ ಭವ್ಯವಾದ ಚನ್ನಬಸವೇಶ್ವರ ಮೂರ್ತಿ ಕೂರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.