ಹುಬ್ಬಳ್ಳಿ: ವಿಜಯನಗರ, ಕುಸುಗಲ್ ರಸ್ತೆ, ಸಿಲ್ವರ್ ಟೌನ್, ತತ್ವಾದರ್ಶ ಆಸ್ಪತ್ರೆ ಹತ್ತಿರ, ಧಾರವಾಡದ ಎತ್ತಿನಗುಡ್ಡ, ಟೋಲ್ ನಾಕಾ ಬಳಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ವಿರುದ್ಧ ಕಮಿಷನರೇಟ್ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಆರು ಮಂದಿಯನ್ನು ಬಂಧಿಸಿರುವ ಪೊಲೀಸರು, ₹39,570 ನಗದು ಹಾಗೂ ಐದು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕನಗರ, ಕೇಶ್ವಾಪುರ, ಗೋಕುಲ ರೋಡ್, ಧಾರವಾಡ ಉಪನಗರ ಮತ್ತು ವಿದ್ಯಾಗಿರಿ ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮದ್ಯ ವಶ: ಹುಬ್ಬಳ್ಳಿಯ ಕುಂಭಕೋಣ ಪ್ಲಾಟ್, ಉಣಕಲ್, ಬಂಜಾರ ಕಾಲೊನಿ, ಡಾಕಪ್ಪ ವೃತ್ತ, ಧಾರವಾಡದ ಕವಲಗೇರಿ ಕ್ರಾಸ್ ಬಳಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಿ, ₹16,700 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿ ಉಪನಗರ, ವಿದ್ಯಾನಗರ, ಗೋಕುಲ್ ರಸ್ತೆ, ಕಮರಿಪೇಟೆ ಮತ್ತು ಧಾರವಾಡ ಉಪನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಒಟಿಪಿ ಪಡೆದು ವಂಚನೆ: ಗೋಕುಲ ರಸ್ತೆಯ ದಾನೇಶ್ವರಿ ನಗರದ ಬಾಳಪ್ಪ ಅವರಿಗೆ ಕರೆ ಮಾಡಿದ ವಂಚಕ, ಅವರಿಂದ ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಪಡೆದು ₹54 ಸಾವಿರ ವರ್ಗಾಯಿಸಿಕೊಂಡಿದ್ದಾನೆ.
ಬಾಳಪ್ಪ ಅವರಿಗೆ ಬ್ಯಾಂಕ್ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ, ಕ್ರೆಡಿಟ್ ಕಾರ್ಡ್ ಸ್ಕೋರ್ ಜಾಸ್ತಿ ಮಾಡುತ್ತೇನೆ ಎಂದು ಕ್ರೆಡಿಟ್ ಕಾರ್ಡ್ ನಂಬರ್ ಪಡೆದಿದ್ದ. ನಂತರ ಅವರ ಮೊಬೈಲ್ಗೆ ಬಂದ ಒಟಿಪಿ ಪಡೆದು ₹14 ಸಾವಿರ ವರ್ಗಾಯಿಸಿಕೊಂಡಿದ್ದ. ನಂತರ ಡೆಬಿಟ್ ಕಾರ್ಡ್ ನಂಬರ್ ಹಾಗೂ ಒಟಿಪಿ ಪಡೆದು ₹40ಸಾವಿರ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.