ADVERTISEMENT

ಎಲ್ಲರಿಗೂ ಕಾನೂನು ಅರಿವು ಮುಖ್ಯ

ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 5:46 IST
Last Updated 14 ನವೆಂಬರ್ 2022, 5:46 IST
ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದ ಮೆಗಾ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಜಶೇಖರ ತಿಳಗಂಜಿ ಉದ್ಘಾಟಿಸಿದರು
ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದ ಮೆಗಾ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಜಶೇಖರ ತಿಳಗಂಜಿ ಉದ್ಘಾಟಿಸಿದರು   

ಹುಬ್ಬಳ್ಳಿ: ‘ಕಾನೂನಿಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಬದಲಿಗೆ, ಕಾನೂನು ಅರ್ಥ ಮಾಡಿಕೊಂಡು, ಕಷ್ಟ ಕಾಲದಲ್ಲಿ ಅದರಿಂದ ರಕ್ಷಣೆ ಪಡೆದುಕೊಳ್ಳಬಹುದು’ ಎಂದು ಹುಬ್ಬಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಹೇಳಿದರು.

ತಾಲ್ಲೂಕಿನ ಅದರಗುಂಚಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೆಗಾ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಯಿಯ ಹೊಟ್ಟೆಯಲ್ಲಿರುವ ಮಗುವಿನಿಂದಿಡಿದು ಸಾವಿನ ನಂತರವೂ ಕಾನೂನು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಕಟ್ಟ ಕಡೆಯ ದುರ್ಬಲ ವ್ಯಕ್ತಿಗಳಿಗೂ ಕಾನೂನು ಅರಿವು ಮೂಡಬೇಕು. ಕಡು ಬಡತನದಿಂದ ಕಾನೂನು ನೆರವಿನಿಂದ ಯಾರೂ ವಂಚಿತರಾಗಬಾರದು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರೆಯಬೇಕಾಗಿದೆ’ ಎಂದು ಸಲಹೆ ನೀಡಿದರು.

ADVERTISEMENT

ಉಪನ್ಯಾಸ ನೀಡಿದ ವಕೀಲೆ ಸವಿತಾ ಪಾಟೀಲ, ‘ಕಾನೂನಿನ ಮುಂದೆ ಎಲ್ಲರೂ ಸಮಾನರು. ಅದರ ಮುಂದೆ ಮೇಲು, ಕೀಳು ಎಂಬುದಿಲ್ಲ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇರುವುದು ದುರ್ದೈವ. ಮನುಷ್ಯನಿಗೆ ಪರಿಸರ ಎಷ್ಟು ಅಗತ್ಯವೋ, ಅದೇ ರೀತಿ ಕಾನೂನಿನ ಅರಿವು ಕೂಡ ಅಷ್ಟೇ ಅಗತ್ಯ. ಯಾರೇ ತಪ್ಪು ಮಾಡಲಿ ಕಾನೂನಿನಲ್ಲಿ ಅವರಿಗೆ ಶಿಕ್ಷೆ ಎಂಬುದಿದೆ. ಸಂವಿಧಾನ ಮನುಷ್ಯನಿಗೆ ಹಕ್ಕಿನ ಜೊತೆಗೆ ಕರ್ತವ್ಯವನ್ನು ಕೊಟ್ಟಿದೆ. ಅದನ್ನು ಅರಿತು ನಡೆದುಕೊಳ್ಳಬೇಕು’ ಎಂದರು.

ಬಿಜೆಪಿ ಮುಖಂಡ ಎಸ್.ಐ. ಚಿಕ್ಕನಗೌಡ್ರ ಮಾತನಾಡಿ, ‘ಗ್ರಾಮೀಣ ಮಟ್ಟದಲ್ಲಿ ಜನರಿಗೆ ಕಾನೂನು ಅರಿವು ತುಂಬಾ ಕಡಿಮೆ. ಇದೀಗನ್ಯಾಯಾಲಯವೇ ಗ್ರಾಮಕ್ಕೆ ಬಂದು ಜನರಿಗೆ ಕಾನೂನು ಅರಿವು ಮೂಡಿಸುತ್ತಿರುವುದು ಖುಷಿಯ ಸಂಗತಿ’ ಎಂದು ಹೇಳಿದರು.

ಗ್ರಾಮಸ್ಥರ ಪ್ರಶ್ನೆಗಳಿಗೆ ನ್ಯಾಯಾಧೀಶರು ಉತ್ತರಿಸಿದರು. ಉಪತಹಶೀಲ್ದಾರ್ ಗಣೇಶ, ಸಿಡಿಪಿಒ ಮೇಲ್ವಿಚಾರಕಿ ಪವಿತ್ರಾ ಎಲಿವಾಳ, ಚಂದ್ರಶೇಖರ ಕುರ್ತುಕೋಟಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಿ.ವಿ. ಕಳ್ಳಿಮನಿ, ವಕೀಲ ಜಿ‌.ಎಫ್. ಸಂಕಣ್ಣವರ, ಗ್ರಾಮ ಪಂಚಾಯಿತಿ ಪಿಡಿಒ ಮುಕ್ತುಂಹುಸೇನ ಕರಡಿಗುಡ್ಡ, ಅಧ್ಯಕ್ಷ ಸಿದ್ದನಗೌಡ ಕಂಟೆಪ್ಪಗೌಡ್ರ, ಸದಸ್ಯರಾದ ಮುಕ್ತುಂಹುಸೇನ ಬಡಿಗೇರ, ಹೊನ್ನಪ್ಪ ಸೋಲಾರಗೊಪ್ಪ, ಶಿಕ್ಷಕ ಸುಭಾಷ ಅಂಚಿ, ಮಧು ಹರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.