ಧಾರವಾಡ: ‘ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ರೈತರಿಂದ ರೈತರಿಗಾಗಿ ಇದ್ದ ಜಾಗವನ್ನು ನೀಡಿದ್ದು ಸರಿಯಲ್ಲ’ ಎಂದು ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಧಾರವಾಡಕ್ಕೆ ನೂತನ ಶಿಕ್ಷಣ ಸಂಸ್ಥೆಗಳು ಬರುತ್ತಿರುವುದು ಸ್ವಾಗತಾರ್ಹ. ಆದರೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಜಾಗ ಹಾಗೂ ಮೂಲಸೌಕರ್ಯಗಳಿದ್ದರೂ, ರೈತರ ಶ್ರೇಯೋಭಿವೃದ್ಧಿಗಾಗಿ ನಡೆಸುವ ಸಂಶೋಧನೆಗಳಿಗೆ ಮೀಸಲಿಟ್ಟಿದ್ದ ಜಾಗವನ್ನು ನೀಡಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ’ ಎಂದಿದ್ದಾರೆ.
‘ಕರ್ನಾಟಕ ವಿ.ವಿಯಲ್ಲಿ 1965ರಿಂದಲೇ ಅಪರಾಧಶಾಸ್ತ್ರ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕ್ಯಾಂಪಸ್ನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಕೋರ್ಸ್ ಆರಂಭಿಸಿದ್ದು ಕವಿವಿ. ಇದೇ ಕ್ಯಾಂಪಸ್ನಲ್ಲೇ ರಾಷ್ಟ್ರೀಯ ವಿಧಿವಿಜ್ಞಾನ ವಿವಿಯ ನೂತನ ಕ್ಯಾಂಪಸ್ ನಿರ್ಮಾಣಗೊಂಡಿದ್ದರೆ ಎರಡೂ ವಿವಿಗಳ ಕೋರ್ಸ್ಗಳಿಗೂ ಪೂರಕವಾಗಿರುತ್ತಿತ್ತು. ಹೀಗಾಗಿದ್ದರೆ ಡಾ. ಡಿ.ಸಿ.ಪಾವಟೆ ಅವರ ಕನಸು ನನಸಾಗುತ್ತಿತ್ತು’ ಎಂದು ದದ್ದಾಪುರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.