ಹುಬ್ಬಳ್ಳಿ: ಹುಕ್ಕಾ ಸೇವನೆಗೆ ಅವಕಾಶ ನೀಡುತ್ತಿದ್ದ ಬಾರ್ ಒಂದರ ಮೇಲೆ ಸೋಮವಾರ ಪಾಲಿಕೆ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಕೋಟ್ಪಾ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ₹5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಬಾರ್ಗೆ ಬೀಗ ಹಾಕಿದೆ.
ಹೊಸೂರಿನ ಹೊಸ ಕೋರ್ಟ್ ಹಿಂಭಾಗದ ನಗರದ ತಿಮ್ಮಸಾಗರ ಬಡಾವಣೆಯಲ್ಲಿ ಅರ್ಬನ್ ರೂಟ್ಸ್ ಹೆಸರಿನಲ್ಲಿ ಕೇಶ್ವಾಪುರದ ಜಯಶೀಲ ಬಾಲ್ಮಿ ಮತ್ತು ನರೇಂದ್ರ ತಿಕಂದರ ಅವರು ಅನಧಿಕೃತವಾಗಿ ಬಾರ್ ನಡೆಸುತ್ತಿದ್ದರು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, 15 ಹುಕ್ಕಾ ಪೈಪ್, 20 ಹುಕ್ಕಾ ಸ್ಟ್ಯಾಂಡ್, ತಂಬಾಕು ವಸ್ತು ಹಾಕಲು ಬಳಸಲಾಗುವ ವಿಸಲಾ ಪೇಪರ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪಾಲಿಕೆ ಆರೋಗ್ಯಾಧಿಕಾರಿ ಡಾ. ಪ್ರಭು ಬಿರದಾರ ಮಾತನಾಡಿ, ‘ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಎರಡು ತಿಂಗಳಿನಿಂದ ಹುಕ್ಕಾ ಬಾರ್ ನಡೆಸುತ್ತಿದ್ದರು. ಪರವಾನಗಿ ಪಡೆಯದೆ ಹೋಟೆಲ್ ಸಹ ನಡೆಸುತ್ತಿದ್ದಾರೆ. ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ’ ಎಂದರು.
‘ಹುಕ್ಕಾ ಬಾರ್ ನಡೆಸಲು ಅನುಮತಿ ನೀಡುವಂತೆ ಸಮಾರು 50 ಅರ್ಜಿಗಳು ಬಂದಿವೆ. ಯಾರೊಬ್ಬರಿಗೂ ಅನುಮತಿ ನೀಡಿಲ್ಲ’ ಎಂದರು.
ಜಿಲ್ಲಾ ಕೋಟ್ಪಾ ಸಲಹೆಗಾರ ಎಂ.ಐ. ಕಲ್ಲಪ್ಪನವರ, ತಾಲ್ಲೂಕು ಆರೋಗ್ಯ ನಿರೀಕ್ಷಕ ಜಿ.ವಿ. ಓಂಕಾರ ಗೌಡರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.