ADVERTISEMENT

ಮುಷ್ಕರ ವಾಪಸ್ ಪಡೆದ ಕಿಮ್ಸ್ ಹೊರ ಗುತ್ತಿಗೆ ನೌಕರರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 12:19 IST
Last Updated 7 ಜುಲೈ 2018, 12:19 IST
ಕಿಮ್ಸ್ ನಿರ್ದೇಶಕ ಡಾ. ಡಿ.ಡಿ. ಬಂಟ್ ಅವರು ಮುಷ್ಕರ ನಿರತ ಹೊರ ಗುತ್ತಿಗೆ ಸಿಬ್ಬಂದಿಯ ಮನವೊಲಿಸಿದರು. ಪ್ರಜಾವಾಣಿ ಚಿತ್ರ
ಕಿಮ್ಸ್ ನಿರ್ದೇಶಕ ಡಾ. ಡಿ.ಡಿ. ಬಂಟ್ ಅವರು ಮುಷ್ಕರ ನಿರತ ಹೊರ ಗುತ್ತಿಗೆ ಸಿಬ್ಬಂದಿಯ ಮನವೊಲಿಸಿದರು. ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕಿಮ್ಸ್ ನಿರ್ದೇಶಕರು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಕಾರಣ ಹೊರ ಗುತ್ತಿಗೆ ಸಿಬ್ಬಂದಿ ಮುಷ್ಕರ ವಾಪಸ್ ಪಡೆದು ಕೆಲಕ್ಕೆ ಮರಳಿದರು. ಶನಿವಾರ ಪ್ರತಿಭಟನಾಕರರನ್ನು ಭೇಟಿ ಮಾಡಿದ ನಿರ್ದೇಶಕ ಡಾ. ಡಿ.ಡಿ. ಬಂಟ್ ಸಮಸ್ಯೆಗಳನ್ನು ಆಲಿಸಿದರು. ಎಲ್ಲ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು. ಬಾಕಿ ಉಳಿದಿರುವ ಸಂಬಳವನ್ನು ಕೆಲವೇ ದಿನಗಲ್ಲಿ ನೀಡಲಾಗುವುದು. ಅಲ್ಲದೆ ನೇರವಾಗಿ ನೌಕರರ ಬ್ಯಾಂಕ್‌ ಖಾತೆಗೆ ಸಂಬಳ ಹಾಕುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಇದಕ್ಕೆ ಒಪ್ಪದ ಕೆಲವು ಪ್ರತಿಭಟನಾಕಾರರು ಎಲ್ಲ ಬೇಡಿಕೆಗಳು ಈಡೇರಬೇಕು ಎಂದು ಪಟ್ಟು ಹಿಡಿದರು. ಮಧ್ಯಪ್ರವೇಶಿಸಿದ ಕಾರ್ಮಿಕ ಮುಖಂಡರು, ಎಲ್ಲ ಬೇಡಿಕೆಗಳನ್ನು ಈಗಲೇ ಈಡೇರಿಸಿ ಎಂದು ಕೇಳುವುದು ಸರಿಯಲ್ಲ. ಮುಖ್ಯ ಬೇಡಿಕೆಗಳ ಬಗ್ಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದ್ದರಿಂದ ಮುಷ್ಕರ ಹಿಂದಕ್ಕೆ ಪಡೆದು ಕೆಲಸಕ್ಕೆ ಮರಳೋಣ ಎಂದು ಮನವೊಲಿಸಿದರು.

‘ಟೆಂಡರ್ ಪಡೆದವರು ತಮ್ಮ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು. ಆದರೆ ಅವರು ಎರಡು– ಮೂರು ತಿಂಗಳಿಗೆ ನೀಡುತ್ತಿದ್ದಾರೆ. ಈಗ ಬಾಕಿ ಇರುವ ವೇತನವನ್ನು ಪಾವತಿ ಮಾಡಲು ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಹೊಸ ಟೆಂಡರ್ ಅನ್ನು ಈಗಾಗಲೇ ಕರೆಯಲಾಗಿದ್ದು, ಕೆಲವರು ಅದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅದನ್ನು ತೆರವು ಮಾಡಿ ಮುಂದಿನ ಪ್ರಕ್ರಿಯೆ ನಡೆಸಲಾಗುವುದು’ ಎಂದು ಬಂಟ್ ಹೇಳಿದರು.

ADVERTISEMENT

ಕನಿಷ್ಠ ₹17,500 ವೇತನ ನಿಗದಿ ಮಾಡಬೇಕು. ನಿರ್ದಿಷ್ಟ ದಿನಾಂಕದಂದು ತಪ್ಪದೇ ವೇತನ ಪಾವತಿ ಮಾಡಬೇಕು. ಇಎಸ್‌ಐ ಹಾಗೂ ಪಿಎಫ್ ಸೌಲಭ್ಯವನ್ನು ಎಲ್ಲ ಸಿಬ್ಬಂದಿಗೂ ನೀಡಬೇಕು. ವೇತನ ಸಹಿತ ವಾರದ ರಜೆ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬುದು ಕಿಮ್ಸ್ ಹೊರ ಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.