ಹುಬ್ಬಳ್ಳಿ: ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡದಿದ್ದಾಗ ಟೀಕಿಸುತ್ತಿದ್ದ ಬಿಜೆಪಿ ಈಗ ರಾಜ್ಯದಲ್ಲಿ ಏಕವ್ಯಕ್ತಿ ಆಡಳಿತ ನಡೆಸುತ್ತಿದೆ ಎಂದು ಹುಬ್ಬಳ್ಳಿ–ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ವೇದವ್ಯಾಸ ಕೌಲಗಿ ಟೀಕಿಸಿದ್ದಾರೆ.
‘ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಶಿಕ್ಷಣ, ಇಂಧನ ಇಲಾಖೆಗೆ ಸಚಿವರೇ ಇಲ್ಲ; ಎಲ್ಲ ಅಧಿಕಾರ ಮುಖ್ಯಮಂತ್ರಿ ಬಳಿ ಕೇಂದ್ರೀಕೃತವಾಗಿದೆ ಎಂದು ಬಿಜೆಪಿಯವರು ಟೀಕಿಸುತ್ತಿದ್ದರು. ಆದರೆ, ಈಗ ಯಡಿಯೂರಪ್ಪ ಒಬ್ಬರೇ ಅಧಿಕಾರ ಸ್ವೀಕರಿಸಿದ್ದಾರೆ. ತೋರಿಕೆಗಾಗಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ’ ಎಂದಿದ್ದಾರೆ.
‘ನಿಷ್ಠಾವಂತ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಿಜೆಪಿ ಸರ್ಕಾರ ಯಾರನ್ನೋ ರಕ್ಷಣೆ ಮಾಡಲು ಹೊರಟಂತಿದೆ. ವಿಶ್ವಾಸಮತ ಯಾಚನೆ ಸಮಯದಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು. ಈಗ ಟಿಪ್ಪು ಜಯಂತಿ ಸರ್ಕಾರದಿಂದ ಆಚರಣೆಯನ್ನು ರದ್ದು ಮಾಡಿದ್ದಾರೆ. ಕುಮಾರಸ್ವಾಮಿ ಅವರನ್ನು ಟೀಕಿಸಿ, ಈಗ ಹೊರ ರಾಜ್ಯಗಳಿಗೆ ಹೋಗಿ ಯಡಿಯೂರಪ್ಪ ಹೋಮ, ಹವನ ಮಾಡಿಸುತ್ತಿದ್ದಾರೆ’ ಎಂದು ದೂರಿದ್ದಾರೆ.
ರೇಣುಕಾಚಾರ್ಯ ಮಂದಿರದಲ್ಲಿ ಪೂಜೆ
ಹುಬ್ಬಳ್ಳಿ: ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದ ಆವರಣದಲ್ಲಿರುವ ರೇಣುಕಾಚಾರ್ಯ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ರೇಣುಕಾಚಾರ್ಯ ಮೂರ್ತಿಗೆ ಪೂಜೆ ಆರಂಭವಾಗಿದ್ದು, ಆ. 30ರ ತನಕ ನಿತ್ಯ ಜರುಗಲಿದೆ.
ಬೆಳಿಗ್ಗೆ 7.30ಕ್ಕೆ ರುದ್ರಾಭೀಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಹಾಗೂ ಕಾರ್ಯದರ್ಶಿ ಚನ್ನಬಸಪ್ಪ.ಆರ್.ಉಕ್ಕಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.