ಹುಬ್ಬಳ್ಳಿ: ನೈರುತ್ಯ ರೈಲ್ವೆ ಪ್ರಸಕ್ತ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ ಒಟ್ಟು ₹4,341 ಕೋಟಿ ಆದಾಯ ಗಳಿಸಿಸುವ ಮೂಲಕ ಕಳೆದ ಬಾರಿಗಿಂತ ₹22 ಕೋಟಿ ಹೆಚ್ಚು ಲಾಭ ಗಳಿಸಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಹೇಳಿದರು.
ನೈರುತ್ಯ ರೈಲ್ವೆ ಕೇಂದ್ರ ಕಚೇರಿಯಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇದೇ ಅವಧಿಯಲ್ಲಿ 2.7 ಕೋಟಿ ಟನ್ಗಳಷ್ಟು ಸರಕು ಸಾಗಣೆ ಮಾಡಲಾಗಿದೆ ಹಾಗೂ ಪ್ರತಿದಿನ 5 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ ಎಂದರು.
ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಹೊಸ 5 ಜೋಡಿ ರೈಲು ಮಾರ್ಗ ಪೂರ್ಣಗೊಳಿಸಲಾಗಿದೆ. 15 ತತ್ಕಾಲ್ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ. 101 ಸುವಿಧಾ ರೈಲು ಸಂಚಾರ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಪ್ರಮುಖ ಮಾರ್ಗಗಳ 266 ಕಿ.ಮೀ.ಗಳಷ್ಟು ಜೋಡಿ ಮಾರ್ಗ ಪೂರ್ಣಗೊಳಿಸಲು ಯೋಜಿಸಲಾಗಿದೆ. ಬಿಂಕದಕಟ್ಟಿ- ಹರ್ಲಾಪುರ ನಡುವಿನ 23 ಕಿ.ಮೀ. ಒಳಗೊಂಡು 106 ಕಿ.ಮೀ. ಜೋಡಿಮಾರ್ಗವಾಗಿ ಪರಿವರ್ತನೆಯಾಗಿದೆ. 76 ಕಿ.ಮೀ.ಗಳಷ್ಟು ಮಾರ್ಗ ವಿದ್ಯುದ್ದೀಕರಣ ಮಾಡಲಾಗಿದೆ ಎಂದರು.
ಲೆವೆಲ್ ಕ್ರಾಸಿಂಗ್ ಗೇಟ್ಗಳನ್ನು ನಿರ್ಮೂಲನೆಗೊಳಿಸುವ ಗುರಿ ಹೊಂದಿದ್ದು, ಮೇಲ್ಸೇತುವೆ ಹಾಗೂ ಕೆಳಸೇತುವೆಯ ಕೆಲಸಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
10 ನಿಲ್ದಾಣಗಳ ಕಟ್ಟಡಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ನಾಲ್ಕು ನಿಲ್ದಾಣಗಳಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜಗಳನ್ನು ಅಳವಡಿಸಲಾಗಿದೆ. ಭದ್ರತೆ ದೃಷ್ಟಿಯಿಂದ ವಿಡಿಯೊ ಪರಿವೀಕ್ಷಣಾ ವ್ಯವಸ್ಥೆ (ವಿಎಸ್ಎಸ್) ಮಾಡಲಾಗಿದೆ. 308 ನಿಲ್ದಾಣಗಳಲ್ಲಿ ವೈಫೈ ಅಳವಡಿಸಿರುವುದಾಗಿ ತಿಳಿಸಿದರು.
ಪ್ರಧಾನ ಕಾರ್ಯಾಲಯ ಹಾಗೂ ಬೆಂಗಳೂರು ವಿಭಾಗಗಳಲ್ಲಿ ಇ-ಕಚೇರಿ ಜಾರಿಗೆ ತರುವ ಮೂಲಕ ನೈರುತ್ಯ ರೈಲ್ವೆಯು ಡಿಜಿಟಲೀಕರಣದತ್ತ ಮುನ್ನಡೆಯುತ್ತಿದೆ. ಹುಬ್ಬಳ್ಳಿ ಹಾಗೂ ಮೈಸೂರುಗಳಲ್ಲಿ ಇ-ಕಚೇರಿ ತೆರೆಯುವ ಕಾರ್ಯ ನಡೆಯುತ್ತಿದ್ದು, ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.