ಧಾರವಾಡ: ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ಅವರು ಇಲಾಖೆಯಲ್ಲಿ ಅಸ್ಪೃಶ್ಯತೆಯನ್ನು ಅನುಭವಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ.
ಫೇಸ್ಬುಕ್ನಲ್ಲಿ ತಮ್ಮ ಭಾವಚಿತ್ರದೊಂದಿಗೆ ಅಸ್ಪೃಶ್ಯತೆ ಕುರಿತು ಬರೆದಿರುವ ಅವರು, ‘ಅಸ್ಪೃಶ್ಯನಾಗಿ ಜನಿಸಿದೆ, ಅಸ್ಪಶ್ಯನಾಗಿ ಬೆಳೆದೆ. ರಾಜ್ಯಮಟ್ಟದ ಅಧಿಕಾರಿಯಾಗಿದ್ದರೂ ಜಾತಿ ರಾಕ್ಷಸರ ನಡುವೆ ಗುಲಾಮ– ಅಸ್ಪೃಶ್ಯನಾಗಿ ಇಂದು ಬದುಕುತ್ತಿದ್ದೇನೆ. ಎರಡು ವರ್ಷಗಳಿಂದಜಾತಿ ಎಂಬ ಕ್ಯಾನ್ಸರ್ ನನ್ನನ್ನು ಬಾಧಿಸಿದೆ. ನಾನು ಅವಮಾನಕ್ಕೀಡಾಗಿದ್ದೇನೆ. ಹೀಗಿದ್ದರೂ ಜಾತಿ ರಾಕ್ಷಸರತ್ತ ನನ್ನ ಪ್ರೀತಿ ಇದ್ದೇ ಇದೆ’ ಎಂದು ಬರೆದುಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಡಾ. ವರ್ಧನ್ ಅವರು ನಿರ್ದೇಶಕ ಹುದ್ದೆಗೆ ಬಡ್ತಿ ಹೊಂದಿದ್ದರು. ಈ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಸಿದ್ಧಲಿಂಗಯ್ಯ ಹಿರೇಮಠ ಅವರಿದ್ದಾರೆ.
‘ಡಾ. ವರ್ಧನ್ ಅವರ ಪೋಸ್ಟ್ ಗಮನಕ್ಕೆ ಬಂದಿದೆ. ಆದರೆ ಅದನ್ನು ಏಕೆ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಗುರುವಾರ ಅವರು ಕಚೇರಿಗೆ ಬಂದಿಲ್ಲ’ ಎಂದು ಹಿರೇಮಠ ತಿಳಿಸಿದರು.
ಪ್ರತಿಕ್ರಿಯೆಗೆ ಡಾ. ವರ್ಧನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.