ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬುಧವಾರ ಜರುಗಿದ ಚುನಾವಣೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೋವಿಡ್ ಹಿನ್ನಲೆಯಲ್ಲಿ ಮತಗಟ್ಟೆಗಳಲ್ಲಿ ಸುರಕ್ಷತೆಗೆ ಒತ್ತು ಕೊಡಲಾಗಿತ್ತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಸೇರಿದಂತೆ ಹಲವು ಪ್ರಮುಖ ನಾಯಕರು ಕೇಶ್ವಾಪುರ ಸಮೀಪದ ಫಾತಿಮಾ ಹೈಸ್ಕೂಲಿನಲ್ಲಿ ಮತದಾನ ಮಾಡಿದರು. ಹುಬ್ಬಳ್ಳಿ ಮಿನಿವಿಧಾನ ಸೌಧದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 45ರಲ್ಲಿ ಶಿರಗುಪ್ಪಿ ವೃತ್ತ ಹಾಗೂ 46ರಲ್ಲಿ ಛಬ್ಬಿ ವೃತ್ತದಲ್ಲಿ ಗ್ರಾಮದ ಪದವೀಧರರು ಮತ ಚಲಾಯಿಸಿದರು.
ಮತದಾನದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ಶೆಟ್ಟರ್ ಹಾಗೂ ಜೋಶಿ ‘ಪಶ್ಚಿಮ ಪದವೀಧರ ಕ್ಷೇತ್ರದ ಹಾವೇರಿ, ಗದಗ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಯ ಪಕ್ಷದ ಪ್ರಮುಖರ ಜೊತೆ ಮಾತನಾಡಿದ್ದೇನೆ. ಕೋವಿಡ್ ಇದ್ದ ಕಾರಣ ಹೆಚ್ಚು ಜನ ಮತಗಟ್ಟೆಗೆ ಬರುವ ಬಗ್ಗೆ ಅನುಮಾನವಿತ್ತು. ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ’ ಎಂದರು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಮತ ಚಲಾಯಿಸಿದರು. ಶಾಸಕ ಪ್ರಸಾದ ಅಬ್ಬಯ್ಯ ಗದಗ ರಸ್ತೆಯ ರೈಲ್ವೆ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆ, ಬ್ರಾಡ್ ವೇ ಟೌನ್ ಪೊಲೀಸ್ ಠಾಣೆಯ ಎದುರಿನ ಮತಗಟ್ಟೆ ಹಾಗೂ ನ್ಯೂ ಇಂಗ್ಲಿಷ್ ಶಾಲೆಯ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.