ADVERTISEMENT

‘ಆಮಿಷಕ್ಕೆ ಮತಗಳು ಬಲಿಯಾಗದಿರಲಿ’

ಮಹದಾಯಿ ಧರಣಿ 988ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 10:21 IST
Last Updated 30 ಮಾರ್ಚ್ 2018, 10:21 IST

ನರಗುಂದ: ‘ದೇಶಕ್ಕೆ ಸ್ವಾತಂತ್ರ್ಯ ದೊರೆತಾಗಿನಿಂದ ಈ ಭಾಗದಿಂದ ಆಯ್ಕೆಯಾದ ಜನಪ್ರತಿನಿಧಿಗಳಿಂದ ರೈತರಿಗೆ ಆಸರೆಯಾಗುವಂತಹ ಯಾವುದೇ ಶಾಶ್ವತ ಯೋಜನೆಗಳು ಜಾರಿಯಾಗಿಲ್ಲ. ಮೂಗಿಗೆ ತುಪ್ಪ ಸವರಿ ನಮ್ಮ ಮತಗಳನ್ನು ಬಾಚಿಕೊಳ್ಳುತ್ತಾ ಬಂದಿರುವ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸುವ ಕಾಲ ಕೂಡಿಬಂದಿದೆ. ರೈತರು ಆಮಿಷಗಳಿಗೆ ಒಳಗಾಗಿ ತಮ್ಮ ಮತಗಳನ್ನು ಬಲಿ ಕೊಡಬಾರದು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಹನುಮಂತ ಸರನಾಯ್ಕರ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 988ನೇ ಗುರುವಾರ ಅವರು ಮಾತನಾಡಿದರು.‘ಚುನಾವಣೆ ಸಮಯದಲ್ಲಿ ಎಲ್ಲ ಪಕ್ಷಗಳು ಮಹದಾಯಿ ವಿಚಾರವನ್ನು ಬಳಸಿಕೊಂಡು ಅಧಿಕಾರದ ಗದ್ದುಗೆ ಏರುತ್ತವೆ. ಆದರೆ, ಈ ಬಾರಿ ಮೂರು ವರ್ಷಗಳಿಂದ ನಡೆಯುತ್ತಿರುವ ಮಹದಾಯಿ ಹೋರಾಟಕ್ಕೆ ಯಾವುದೇ ಪರಿಹಾರ ದೊರೆಯಲಿಲ್ಲ. ಇದನ್ನು ಎಲ್ಲ ರೈತರು ಅರಿಯಬೇಕು ಎಂದು ಅವರು ಹೇಳಿದರು.

ನಮ್ಮ ಹೋರಾಟವನ್ನು ಬಹಳ ಲಘುವಾಗಿ ಪರಿಗಣಿಸಿರುವ ಸರ್ಕಾರಗಳಿಗೆ ಸರಿಯಾದ ಪಾಠ ಕಲಿಸಲಾಗುವುದು’ ಎಂದರು.‘ಮಹದಾಯಿ ನೀರು ಪಡೆಯಲು ನಾವು ಎಲ್ಲ ತ್ಯಾಗಕ್ಕೂ ಸಿದ್ಧರಿದ್ದೇವೆ. ಇದನ್ನು ಈ ಭಾಗದಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬರು ಅರಿಯಬೇಕು. ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಸರಿಯುವುದಿಲ್ಲ’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಅರ್ಜುನ ಮಾನೆ ಹೇಳಿದರು.

ADVERTISEMENT

ಎಸ್‌.ಕೆ.ಗಿರಿಯಣ್ಣವರ, ವಾಸು ಚವ್ಹಾಣ, ಮೃತ್ಯುಂಜಯ ಹಿರೇಮಠ, ರಮೇಶ ನಾಯ್ಕರ, ವಿರೂಪಾಕ್ಷಿ ಪಾರಣ್ಣವರ, ಕಾಡಪ್ಪ ಕಾಕನೂರು, ಕೆ.ಎಚ್‌.ಮೊರಬದ ಧರಣಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.