ADVERTISEMENT

ಎರಿಸೀಮೆಯ ಕಣ್ಮನ ಸೆಳೆಯುವ ಉದ್ಯಾನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 7:23 IST
Last Updated 14 ಜೂನ್ 2013, 7:23 IST

ನರಗುಂದ: ಬಂಡಾಯಕ್ಕೆ ಹೆಸರಾದ ಸಾಂಸ್ಕೃತಿಕ, ಸಾಹಿತ್ಯಿಕ, ಅಧ್ಯಾತ್ಮಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಪಟ್ಟಣದ ಮಧ್ಯಭಾಗದಲ್ಲಿರುವ ಪುರಸಭೆ ಎದುರಿಗೆ ತಲೆ ಎತ್ತಿರುವ ಹಸಿರುಮಯ ಆಕರ್ಷಕ ಉದ್ಯಾನ ಪರಿಸರ ಪ್ರೇಮಿಗಳನ್ನು ಕೈ ಮಾಡಿ ಕರೆಯುತ್ತಿದೆ. 

ಹಲವಾರು ವರ್ಷಗಳಿಂದ ಪುರಸಭೆ ಎದುರಿಗೆ ಇರುವ ಸ್ಥಳವು ಹಾಳು ಕೊಂಪೆಯಾಗಿ ಬಹಿರ್ದೆಸೆಯ ತಾಣವಾಗಿತ್ತು. ಇದರ  ಬಗ್ಗೆ ಸಾರ್ವಜನಿಕರು ರೋಸಿಹೋಗಿದ್ದರು. ಈ  ಹಾಳಾದ ಸ್ಥಳದ ಪಕ್ಕದಲ್ಲಿ ಆಧ್ಯಾತ್ಮ ತಾಣ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊರಾರ್ಜಿ ವಸತಿ ಶಾಲೆಗಳಿದ್ದರೂ ಇದಾವುದನ್ನು ಲಕ್ಷಕ್ಕೆ ತೆಗೆದುಕೊಳ್ಳದ  ಕೆಲವರು ಇದನ್ನು ಅನ್ಯ ಚಟುವಟಿಕೆಗಳಿಗೆ ಬಳಸಿದ್ದರಿಂದ  ಪಟ್ಟಣದ ಸೌಂದರ್ಯಕ್ಕೆ ಮಾರಕವೆಂಬಂತೆ ಕಂಡು ಬಂದಿತ್ತು.

ಪುರಸಭೆಯ ಎಸ್‌ಎಫ್‌ಸಿ ಯೋಜನೆಯಡಿ ಮೂರು ಲಕ್ಷ ರೂಪಾಯಿಗಳಲ್ಲಿ ನಿರ್ಮಿಸಲ್ಪಟ್ಟ ಈ ಉದ್ಯಾನಕ್ಕೆ  ಮಹಾನಗರಗಳ್ಲ್ಲಲಿರುವ ಉದ್ಯಾನಗಳಂತೆ ಆಧುನಿಕತೆಯ  ಸ್ಪರ್ಶ ನೀಡಲಾಗಿದೆ.  ಹೊಸ ಹೊಸ ಸಸಿಗಳನ್ನು ನೆಡಲಾಗಿದೆ. ಸಂಪೂರ್ಣ ಹುಲ್ಲು ಹಾಸಿಗೆಯಿಂದ ತುಂಬ್ದ್ದಿದು ಮೆದು ಮೆತ್ತನೆಯ ಅನುಭವ ನೀಡುವುದರೊಂದಿಗೆ ಮನಸ್ಸಿಗೆ ಆಹ್ಲಾದ ಮೂಡಿಸುತ್ತದೆ. ವಿಶ್ರಾಂತಿಗೆ ಹೇಳಿ ಮಾಡಿಸಿದ ಜಾಗೆಯಾಗಿದೆ.

ಹಲವು ವೈಶಿಷ್ಟ್ಯ: ಈ ವನದ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎಸ್. ರಾಜಶೇಖರ `ಸಾರ್ವಜನಿಕರ ಒತ್ತಾಸೆ,  ಪುರಸಭೆ ಸದಸ್ಯರ ಕಾಳಜಿ,  ನಮ್ಮ ಸಿಬ್ಬಂದಿಯ ಶ್ರಮದ ಫಲವಾಗಿ ಈ ಉದ್ಯಾನವನ ತಲೆ ಎತ್ತಿದೆ. ಧಾರವಾಡದಲ್ಲಿರುವ ಉದ್ಯಾನ ನಿರ್ಮಾಣದಲ್ಲಿ ಪರಿಣಿತಿ ಪಡೆದವರಿಂದ ನಿರ್ಮಿಸಲಾಗಿದ್ದು, ಇನ್ನು ಕೆಲಸ ಪ್ರಗತಿಯಲ್ಲಿದೆ. ಹಲವಾರು ವಿಶೇಷತೆಗಳನ್ನು  ಇಲ್ಲಿ ರೂಪಿಸಲಾಗುವುದು. ಮಕ್ಕಳಿಗೆ ಆಡಲು ವಿಶೇಷ     ಸಾಧನಗಳ ವ್ಯವಸ್ಥೆ, ಸಣ್ಣ ಸಣ್ಣ  ಕೌಟುಂಬಿಕ ಸಮಾರಂಭಗಳಿಗೆ ಇಲ್ಲಿ  ನಡೆಯುವಂತೆ ವ್ಯವಸ್ಥೆ ಮಾಡಲಾಗು ವುದು. ವಾಯುವಿಹಾರಕ್ಕೆ ಬರುವವ ರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು. ಒಟ್ಟಾರೆ ಇದಕ್ಕೆ ಹೊಸ ರೂಪ ನೀಡುವ ಮೂಲಕ ಮಾದರಿ ಉದ್ಯಾನವನ ನಿರ್ಮಿಸಲಾಗುವುದು ಎಂದರು.

ಜೊತೆಗೆ ಪಟ್ಟಣದ ಸೌಂದರ್ಯಕ್ಕೆ ಬೇಕಾಗುವ ಹೊಸ  ಹೊಸ ಯೋಜನೆ ಕೈಗೊಳ್ಳಲಾಗುವುದೆಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.