ADVERTISEMENT

ದೇಶದ್ಲ್ಲಲೇ ಮೊದಲ ಬಾರಿ ಬಾಲ ಸಂಜೀವಿನಿ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 7:20 IST
Last Updated 11 ಜೂನ್ 2011, 7:20 IST

ಮುಂಡರಗಿ: `ರಾಜ್ಯ ಸರಕಾರವು ದೇಶದಲ್ಲಿಯೇ ಮೊದಲ ಬಾರಿಗೆ `ಬಾಲ ಸಂಜೀವಿನಿ~ ಯೋಜನೆಯ ಅಡಿಯಲ್ಲಿ ಆರು ವರ್ಷದ ಒಳಗಿನ ಎಲ್ಲ ಮಕ್ಕಳ ಚಿಕಿತ್ಸೆಗಾಗಿ 35-50ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ~ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಸ್ಥಳೀಯ ಹೆಸರೂರ ರಸ್ತೆಯ ಬಳಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

 ಸುವರ್ಣ ಭೂಮಿ ಯೋಜನೆಗೆ ರಾಜ್ಯ ಸರಕಾರದ ನಿಗದಿತ ಗುರಿಗಿಂತ ಹೆಚ್ಚಿನ ರೈತರು ಅರ್ಜಿ ಸಲ್ಲಿಸಿರುವುದರಿಂದ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಯಿತು. ರೈತರು, ಸ್ಥಳೀಯ ಗಣ್ಯರು ಹಾಗೂ ಅಧಿಕಾರಿಗಳ ಸಮಕ್ಷಮದಲ್ಲಿ ಚೀಟಿ ಎತ್ತುವುದರಿಂದ ಲಾಟರಿಯಲ್ಲಿ ಅವ್ಯವಹಾರಗಳಾಗಲು ಸಾಧ್ಯವಿಲ್ಲ. ಚೀಟಿ ಎತ್ತುವುದನ್ನು ಅನವಶ್ಯಕವಾಗಿ ಟೀಕಿಸದೆ ಸಾವಿರ ಕೋಟಿ ರೂಪಾಯಿಗಳನ್ನು ರೈತರಿಗೆ ನೀಡುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ ಎಂದು ಅವರು ತಿಳಿಸಿದರು.

 ಕಪ್ಪತ್ತಗುಡ್ಡವನ್ನು `ಔಷಧೀಯ ಸಸ್ಯಗಳ ವನ~ ಎಂದು ಸಾರಿರುವುದರಿಂದ ಅದರ ರಕ್ಷಣೆಯ ಜವಾಬ್ದಾರಿ ಸ್ಥಳೀಯರ ಮೇಲೆ ಹೆಚ್ಚಿರುತ್ತದೆ. ಸರಕಾರದ ಜೊತೆ ಸ್ಥಳೀಯರು ಸೇರಿಕೊಂಡು ಕಪ್ಪತ್ತಗುಡ್ಡವನ್ನು ಅಭಿವೃದ್ಧಿಪಡಿಸಬೇಕಿದೆ. ಕಪ್ಪತ್ತಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿದು ಬಂದರೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು.

ತುಂಗಭದ್ರಾ ನದಿಯಲ್ಲಿ ಮರಳು ಸಾಗಾಣಿಕೆ ಹಾಗೂ ಅನಗತ್ಯ ಅರಣ್ಯ ನಾಶ ಕುರಿತಂತೆ ಮಾಹಿತಿ ಸಿಕ್ಕಲ್ಲಿ ತಕ್ಷಣ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸರ್ಕಾರದ ಸಹಾಯವನ್ನು ನಿರೀಕ್ಷಿಸದೆ ಮುಂಡರಗಿ ಉತ್ಸವವನ್ನು ನೆರವೇರಿಸುತ್ತಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಮುಂಡರಗಿ ಉತ್ಸವವನ್ನು ಜಿಲ್ಲಾ ಉತ್ಸವವನ್ನಾಗಿ ಆಚರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಮುಂಡರಗಿ ಉತ್ಸವವನ್ನು ಒಂದು ಮಾದರಿ ಉತ್ಸವವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.

 ಶಾಸಕರಾದ ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬೀರಪ್ಪ ಬಂಡಿ, ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.