ADVERTISEMENT

ದೊರೆಯದ ಸೌಲಭ್ಯ: ಗ್ರಾ.ಪಂಗೆ ಬೀಗ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 8:00 IST
Last Updated 4 ಅಕ್ಟೋಬರ್ 2012, 8:00 IST

ಮುಂಡರಗಿ: ಮೂಲ ಸೌಲಭ್ಯಗಳನ್ನು ಪೂರೈಸುವಲ್ಲಿ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಸಂಪೂರ್ಣವಾಗಿ ವಿಫಲರಾ ಗಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಹಾರೋಗೆರಿ ಗ್ರಾಮಸ್ಥರು ಬುಧವಾರ ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಮದ ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಪ್ರತಿನಿತ್ಯ ವ್ಯತ್ಯಯ ಉಂಟಾಗುತ್ತಿದ್ದು, ಈ ಕುರಿತು ಪಂಚಾಯ್ತಿ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದ ದೂರಿದರು.

ಹೊರ ವಲಯದಲ್ಲಿರುವ ಪ್ಲಾಟ್‌ಗೆ ನೀರು ಸರಬರಾಜು ಮಾಡುವ ಕಾಮಗಾರಿಯಲ್ಲಿ ತುಂಬಾ ಅವ್ಯವಹಾರ ಗಳಾಗಿದ್ದು, ಅಪಾರ ಪ್ರಮಾಣದ ಹಣ ದುರುಪಯೋಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆಶ್ರಯ ಮನೆ ವಿತರಣೆಯ್ಲ್ಲಲೂ ತಾರತಮ್ಯ ಎಸಗಿದ್ದು, ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳು ಸಿಕ್ಕಿಲ್ಲ ಎಂದು ಪ್ರತಿಭನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿರುವ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಸಿಮೆಂಟ್ ಅಥವಾ ಕಾಂಕ್ರೀಟ್ ಇಲ್ಲದೆ ರಸ್ತೆಯ ತುಂಬೆಲ್ಲ ಆಳವಾದ ಗುಂಡಿಗಳು ನಿರ್ಮಾಣ ವಾಗಿವೆ. ಇದರಲ್ಲಿ ಹೊಲಸು ನೀರು ನಿಲ್ಲುತ್ತಿದ್ದು, ಕ್ರಿಮಿ ಕೀಟಗಳ ವಾಸಸ್ಥಾನವಾಗಿವೆ. ಇದರಿಂದಾಗಿ ಗ್ರಾಮದಲ್ಲಿ ಹಲವಾರು ಸಾಂಕ್ರಾಮಿಕ ರೋಗಗಳು ಹರಡತೊಡಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮೂಲ ಸೌಲಭ್ಯಗಳನ್ನು ಒದಗಿಸು ವಂತೆ ಹಲವಾರು ಬಾರಿ ಗ್ರಾ.ಪಂ.ಗೆ ಮನವಿ ಮಾಡಿದ್ದರೂ ಪಂಚಾಯ್ತಿ ಯವರು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸಿ ಗ್ರಾಮಸ್ಥರ ಸಮಸ್ಯೆ ಗಳನ್ನು ಬಗೆಹರಿಸುವವರೆಗೂ ಪ್ರತಿಭ ಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಷಡಕ್ಷರಯ್ಯ ಮಾಡಲಗೇರಿ ಹಿರೇಮಠ, ಅಮೃತಮ್ಮ ಹಳ್ಳಿ, ಹನುಮಪ್ಪ ಕಂದಗಲ್ಲ, ದೇವಕ್ಕ ಚವಡಕಿ, ರಾಮಣ್ಣ ಕಂದಗಲ್ಲ, ಯಮನೂರಸಾಬ್ ಗರಡಿಮನಿ, ರಾಜಾಸಾಬ್ ನದಾಫ್, ಸಿದ್ಧಲಿಂಗಪ್ಪ ಚವಡಕಿ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.