ADVERTISEMENT

ಪ್ಲಾಸ್ಟಿಕ್ ಬಳಕೆ: ಜನರಲ್ಲಿ ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 10:35 IST
Last Updated 25 ಜನವರಿ 2012, 10:35 IST
ಪ್ಲಾಸ್ಟಿಕ್ ಬಳಕೆ: ಜನರಲ್ಲಿ ಜಾಗೃತಿ ಅಗತ್ಯ
ಪ್ಲಾಸ್ಟಿಕ್ ಬಳಕೆ: ಜನರಲ್ಲಿ ಜಾಗೃತಿ ಅಗತ್ಯ   

ಲಕ್ಷ್ಮೇಶ್ವರ: ಭಾರತ ಸರ್ಕಾರದ ಪ್ಲಾಸ್ಟಿಕ್ ವೇಸ್ಟ್ ರೂಲ್ಸ್-2011ರ ಪ್ರಕಾರ 40 ಮೈಕ್ರಾನ್ಸ್‌ಕ್ಕಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್ ಚೀಲ ಮತ್ತು ಪ್ಲಾಸ್ಟಿಕ್ ಚೀಲದ ಸಮಾನಾಂತರ ವಸ್ತುಗಳಿಗೆ ನಿರ್ಬಂಧ ಹೇರಲಾಗಿದ್ದು ಇದರ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಪಟ್ಟಣದಲ್ಲಿ ಜಿಲ್ಲಾಡಳಿತ, ಪುರಸಭೆ, ಎಂ.ಎ. ಕಾಲೇಜು  ಸಂಯುಕ್ತ ಆಶ್ರಯದಲ್ಲಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
 
ಜಿಲ್ಲಾ ನಗರ ಯೋಜನಾ ನಿರ್ದೇಶಕ ಶಿವಣ್ಣ ಗರಗ, ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ ಅವರು ಜಾಥಾ ಉದ್ಘಾಟಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ನಂತರ ಜಾಥಾ ಬಜಾರ್, ಪೇಟೆ ಹನುಂತ ದೇವರ ದೇವಸ್ಥಾನ, ದೂದಪೀರಾಂ ದರ್ಗಾ, ಶ್ರೀಕೃಷ್ಣಾ ಚಿತ್ರ ಮಂದಿರ, ಹಳೇ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಮೂಲಕ ಸಂಚರಿಸಿ ನಂತರ ಪುರಸಭೆಗೆ ಆಗಮಿಸಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ನಗರ ಯೋಜನಾ ನಿರ್ದೇಶಕ ಶಿವಣ್ಣ ಗರಗ ಅವರು ಅಂಗಡಿಗಳಿಗೆ ತೆರಳಿ `ಪುರಸಭೆಗೆ ತುಂಬಬೇಕಾದ ಕರಗಳನ್ನು ಸರಿಯಾದ ಸಮಯಕ್ಕೆ ತುಂಬಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೆಕು~ ಎಂದು ಅಂಗಡಿ ಮಾಲಿಕರಲ್ಲಿ ಮನವಿ ಮಾಡಿದ್ದು ವಿಶೇಷವಾಗಿತ್ತು.

ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಸಾತಪುತೆ ಹಾಗೂ ಸರ್ವ ಸದಸ್ಯರು, ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ, ಡಾ.ಡಿ.ಟಿ. ದೊಡ್ಡಮನಿ, ಪರಿಸರ ಅಭಿಯಂತರ ಆನಂದ ಬದಿ, ಆರೋಗ್ಯ ನಿರೀಕ್ಷಕ ಬಿ. ಮಂಜುನಾಥ, ಪುರಸಭೆ ಕಂದಾಯ ನಿರೀಕ್ಷಕ ರಾಜು ಬಣಕಾರ, ಕರ ವಸೂಲಿಗಾರರಾದ ಎಚ್.ಎನ್. ಬಳ್ಳಾರಿ, ಬಿ.ಕೆ. ಬೆಳವಗಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.