ADVERTISEMENT

ಮತ್ತೆ ಚಿಗುರಿದ ಬೋಟಿಂಗ್‌ ಕನಸು

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:06 IST
Last Updated 17 ಜುಲೈ 2017, 7:06 IST
ಗದುಗಿನ ಭೀಷ್ಮ ಕೆರೆ ತುಂಗಭದ್ರಾ ನದಿ ನೀರಿನಿಂದ ಮೈದುಂಬಿಕೊಳ್ಳುತ್ತಿದೆ
ಗದುಗಿನ ಭೀಷ್ಮ ಕೆರೆ ತುಂಗಭದ್ರಾ ನದಿ ನೀರಿನಿಂದ ಮೈದುಂಬಿಕೊಳ್ಳುತ್ತಿದೆ   

ಗದಗ: ಗದಗ–ಬೆಟಗೇರಿ ಅವಳಿ ನಗ ರದ ಹೃದಯ ಭಾಗದಲ್ಲಿ ಇರುವ ಐತಿಹಾಸಿಕ ಭೀಷ್ಮ ಕೆರೆಗೆ ಕಳೆದ10 ದಿನಗಳಿಂದ ತುಂಗಭದ್ರಾ ನದಿ ನೀರು ಹರಿದುಬರುತ್ತಿದೆ. ಬೇಸಿಗೆಯಲ್ಲಿ ಒಣಗಿ ಬಾಯ್ದೆರೆದು ನಿಂತಿದ್ದ ಕೆರೆಯಲ್ಲಿ ಈಗ ಜೀವಜಲ ಭರ್ತಿಯಾಗುತ್ತಿದೆ.

103 ಎಕರೆ ವಿಸ್ತೀರ್ಣದ ಈ ಕೆರೆ ಭರ್ತಿ ಆಗಲು ಕನಿಷ್ಠ 22 ದಿನ ನಿರಂತರವಾಗಿ ನೀರು ಹರಿಸಬೇಕು. ಕೆರೆ ನೀರಿನ ಮಟ್ಟ ನಿಧಾನವಾಗಿ ಮೇಲೇರುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ಹಾಗೂ ನಗರ ವಾಸಿಗಳಲ್ಲಿ ಸಂತಸ ಮೂಡಿದೆ. ಮತ್ತೆ ಇಲ್ಲಿ ಬೋಟಿಂಗ್‌ ಆರಂಭವಾಗುವ ಕನಸು ಚಿಗುರಿದೆ.

ಭೀಷ್ಮಕೆರೆಯ ನೀರು ಸಂಗ್ರಹಣ ಸಾಮರ್ಥ್ಯ 0.22 ಟಿಎಂಸಿ ಅಡಿ. ನೈಸರ್ಗಿಕವಾಗಿ, ಮಳೆಯಾಗಿ ಈ ಕೆರೆ ತುಂಬಿದ್ದು ಹಲವು ದಶಕಗಳ ಹಿಂದೆ. ಕೃತಕವಾಗಿ ಕೆರೆ ತುಂಬಿಸುವ ಕೆಲಸ ಈಗ ನಡೆಯುತ್ತಿದೆ.  ನಗರದಿಂದ 60 ಕಿ.ಮೀ. ದೂರದಲ್ಲಿರುವ ತುಂಗಭದ್ರಾ ನದಿ ನೀರನ್ನು ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಮೂರು ಹಂತಗಳಲ್ಲಿ ಲಿಫ್ಟ್ ಮಾಡಿ ಭೀಷ್ಮ ಕೆರೆಗೆ ತರಲಾಗುತ್ತಿದೆ.

ADVERTISEMENT

ಇದಕ್ಕಾಗಿ ನಗರದ ಮೈಲಾರಪ್ಪ ಮೆಣಸಗಿ ಕಾಲೇಜು ಬಳಿಯ ಜಾಕ್ವೆಲ್‌ ನಿಂದ 7 ಕಿ.ಮೀ. ಉದ್ದದ ಪೈಪ್‌ಲೈನ್ ಅಳವಡಿಸಲಾಗಿದೆ. ಪ್ರತಿ ಸೆಕೆಂಡ್‌ಗೆ 12.5 ಕ್ಯೂಬಿಕ್ ಸೆ.ಮೀ.ನಷ್ಟು ಕರೆಗೆ ಹರಿಸುತ್ತಿದ್ದಾರೆ. ವರ್ಷದ ಹಿಂದೆಯೇ ಕೆರೆಯ ಹೂಳು ತೆಗೆದಿರುವುದರಿಂದ ಈಗ ಅದರಲ್ಲಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೆಚ್ಚಿದೆ.

ಕಳೆದ ವರ್ಷವೂ ಭೀಷ್ಮಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸಲಾ ಗಿತ್ತು. ಇದರಿಂದ ಕೆರೆಯ ಸುತ್ತಮುತ್ತ ಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದವು. ಕುಡಿಯುವ ನೀರಿನ ಉದ್ದೇ ಶಕ್ಕೆ ನಗರಸಭೆ ವತಿಯಿಂದ ಈ ಕರೆಯ ಕೆಳಗಿನ ಪ್ರದೇಶದಲ್ಲಿ ಕೊರೆಯಲಾದ ಐದೂ ಕೊಳವೆಬಾವಿಗಳಲ್ಲಿ ಜೀವಜಲ ಉಕ್ಕಿ ಹರಿದಿತ್ತು.

‘ಕೆರೆ ತುಂಬಿಸುವ ಜತೆಯಲ್ಲೇ, ಕೆರೆ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳುವ ಬಗ್ಗೆ ನಗರಸಭೆ ವಿಶೇಷ ಕಾಳಜಿ ವಹಿಸಬೇಕು’ ಎನ್ನುತ್ತಾರೆ ನಗರದ ನಿವಾಸಿ ವಿ.ಎಂ. ಮಾವಿನಕಾಯಿ ಅವರು.ಭೀಷ್ಮ ಕೆರೆಗೆ 2016ರ ಆಗಸ್ಟ್‌ ಮತ್ತು 2017ರ ಜುಲೈನಲ್ಲಿ ತುಂಗಭದ್ರಾ ನದಿ ನೀರು ಹರಿಸಲಾಗಿದೆ. ಜುಲೈನಲ್ಲಿ ಕೆರೆ ತುಂಬಿದಾಗ ಬೋಟಿಂಗ್‌ ಆರಂಭಿಸಲಾಗಿತ್ತು.

ವಾರಾಂತ್ಯದ ದಿನಗಳಲ್ಲಿ ನೂರಾರು ಸಂಖ್ಯೆಯ ಪ್ರವಾಸಿಗರು ಬೋಟಿಂಗ್‌ ಖುಷಿ ಅನುಭವಿಸಿದ್ದರು. ಬೋಟಿಂಗ್‌ ನಿರ್ವಹಣೆಯನ್ನು ಜಿಲ್ಲಾ ಆಡಳಿತ ನಿರ್ಮಿತಿ ಕೇಂದ್ರಕ್ಕೆ ವಹಿಸಿತ್ತು. ಈಗ ಮತ್ತೆ ಕರೆ ತುಂಬುತ್ತಿರುವ ಹಿನ್ನೆಲೆ ಯಲ್ಲಿ ಬೋಟಿಂಗ್‌ ಆರಂಭವಾಗ ಬಹುದು ಎಂಬ ನಿರೀಕ್ಷೆಯಲ್ಲಿ ನಗರ ವಾಸಿಗಳು ಇದ್ದಾರೆ.

* * 

ಹಮ್ಮಿಗಿ ಬ್ಯಾರೇಜ್‌ನಿಂದ ತುಂಗಭದ್ರಾ ನೀರನ್ನು ಭೀಷ್ಮ ಕೆರೆಗೆ ಹರಿಸಲಾಗುತ್ತಿದೆ. ಮಾರ್ಗದ ಮಧ್ಯದಲ್ಲಿ ದುಷ್ಕರ್ಮಿಗಳು ಪೈಪ್‌ ಒಡೆಯುತ್ತಿದ್ದು ಅಡತಡೆಯಾಗಿದೆ
ಎಲ್.ಜಿ.ಪತ್ತಾರ
ನಗರಸಭೆ ಎಇಇ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.