ADVERTISEMENT

ಮುಗಿಯದ ಸೇತುವೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 10:40 IST
Last Updated 14 ಜನವರಿ 2011, 10:40 IST

ಶಿರಹಟ್ಟಿ: ಪಟ್ಟಣದ ಕೆಳಗೇರಿ ಓಣಿಯಲ್ಲಿ ಜಾರಿಯಲ್ಲಿರುವ ಸೇತುವೆ ಕಾಮಗಾರಿಗೆ ಎರಡು ವರ್ಷಗಳಾದರೂ  ಪೂರ್ಣಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಪಟ್ಟಣದ ಜನತೆ ಬಹುದಿನಗಳ ಬೇಡಿಕೆಯಾದ ಸೇತುವೆ ಪ್ರಾರಂಭವಾದಾಗ ಹರ್ಷ ಪಟ್ಟಿದ್ದ ಜನತೆ ಇಂದು ಕಾಮಗಾರಿಯ ನಿಧಾನಗತಿಯನ್ನು ಕಂಡು ನಿರಾಸೆ ಪಡುವಂತಾಗಿದೆ.

ಪಟ್ಟಣದಿಂದ ಜಿಲ್ಲಾ ಸ್ಥಳವಾದ ಗದಗ ನಗರಕ್ಕೆ ನಿತ್ಯ ಸಂಚರಿಸಲು ಅನುಕೂಲಕರವಾಗಿರುವ ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ತಗ್ಗು ದಿನ್ನೆಗಳಿಂದ ಆವೃತವಾಗಿರುವ ಮತ್ತು ದುರಸ್ಥಿಯಲ್ಲಿರುವ ಈಗಿನ ರಸ್ತೆಯಲ್ಲಿ ಪ್ರಯಾಣಿಸಲು ಭಯಪಡುವಂತಹ ಪರಸ್ಥಿತಿ ಬಂದೊದಗಿದ್ದರೂ ಸಂಬಂಧಿಸಿದವರು ಕ್ಯಾರೆ ಎನ್ನುತ್ತಿಲ್ಲ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ನಡೆಯುತ್ತಿರುವ ಸೇತುವೆ ಹಲವಾರು ವಿಘ್ನಗಳನ್ನು ಎದುರಿಸಿ ಮುನ್ನಡೆದರೂ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ.ಸೇತುವೆಯ ಎರಡು ಕಡೆ ಪಿಲ್ಲರ್‌ಗಳ ನಿರ್ಮಾಣ, ಸಮತಟ್ಟು, ಡಾಂಬರೀಕರಣ ಸೇರಿದಂತೆ ಕಾಮಗಾರಿಯ ಹಲವಾರು ಕೆಲಸಗಳು ಬಾಕಿ ಇದ್ದು, ಈಗಾಗಲೇ ಕನಿಷ್ಟ ಆರು ತಿಂಗಳು ಗತಿಸಿದರೂ ಗುತ್ತಿಗೆದಾರನು ಇತ್ತ ಗಮನ ನೀಡುವ ಕುರಿತು ಯೋಚಿಸದಿರುವುದು ವಿಪರ್ಯಾಸದ ಸಂಗತಿ.  

 ಮುಳಗುಂದ, ಕಣವಿ, ಖಾನಾಪೂರ ಮತ್ತಿತರ ಕಡೆಗಳಿಂದ ರಭಸವಾಗಿ ಹರಿದು ಬರುವ ಮತ್ತು ಸೆಳತವುಳ್ಳ ಅಪಾಯಕಾರಿ ಹಳ್ಳಕ್ಕೆ ತಕ್ಷಣ ಸೇತುವೆ ನಿರ್ಮಾಣ ಮಾಡಿ ಎಂಬ ಸಾರ್ವಜನಿಕರ ಮನವಿಗೆ ಕಿವಿಗೊಡದ ಅಧಿಕಾರಿಗಳು ಜೀವಹಾನಿ ಸಂಭವಿಸಿದಾಗ ಎಚ್ಚತ್ತುಕೊಳ್ಳುತ್ತಾರೆಯೇ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. 

ಮಳೆಗಾಲ ಬಂತೆಂದರೆ ರಸ್ತೆಯಲ್ಲಿ ಪ್ರಯಾಣಿಸಲು ಭಯಪಡುವ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸಬೇಕು. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಪಾಡಂತೂ ಹೇಳತೀರದು.  ಅನುದಾನ ಬಿಡುಗಡೆಗೊಂಡು ವರ್ಷಗಳು ಗತಿಸಿದರೂ ಕಣ್ಮುಚ್ಚಿ ಕುಳಿತರುವ ಸಂಬಂಧಿಸಿದ ಇಲಾಖೆಯ ನಿರ್ಲಕ್ಷ ಮತ್ತು ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೂ ಕಾರಣ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.              
ಮಂಜುನಾಥ ಆರಪಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.