ನರಗುಂದ: ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಾಯಕವಾಗಿದೆ. ಪ್ರತಿಯೊಬ್ಬರು ನಿತ್ಯ ಯೋಗವನ್ನು ರೂಢಿಸಿಕೊಳ್ಳಬೇಕಿದೆ. ಇದರಿಂದ ರೋಗ ಮುಕ್ತರಾಗಿ ಉತ್ತಮ ಸ್ವಾಸ್ಥ್ಯ ಹೊಂದಲು ಸಾಧ್ಯ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸಪ್ಪ ಕಂಠಿ ಹೇಳಿದರು.
ಪಟ್ಟಣದ ಬಸವೇಶ್ವರ ವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಯೋಗ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಯೋಗವು ಭಾರತೀಯರ ಮುಖ್ಯ ಕೊಡುಗೆಯಾಗುವ ಮೂಲಕ ಇದನ್ನು ಎಲ್ಲ ದೇಶಗಳು ಅನುಸರಿಸುವಂತಾಗಿದೆ. ವಿಶ್ವಮಾನ್ಯವಾಗಿರುವ ಯೋಗಕ್ಕೆ ಅಂತರ ರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆತಂತಾಗಿದೆ. ಜೂನ್ 21 ಅಂತರರಾಷ್ಟ್ರೀಯ ಯೋಗ ದಿನಾಚರಣೆಯಾಗಿರುವುದು ಸಂತಸ ತಂದಿದೆ. ಇದರ ಅಂಗವಾಗಿ ಯೋಗ ಸಪ್ತಾಹ ನಡೆಯುತ್ತಿರುವುದು ನಮ್ಮ ಪಟ್ಟಣದ ನಾಗರಿಕರಿಗೆ ಹೊಸ ಚೈತನ್ಯ ಮೂಡಿಸಿದಂತಾಗಿದೆ ಎಂದರು.
ಎಲ್ಲರೂ ಈ ಸಪ್ತಾಹದಲ್ಲಿ ಪಾಲ್ಗೊಂಡು ದೈಹಿಕ, ಮಾನಸಿಕ ನೆಮ್ಮದಿ ಹೊಂದುವಂತೆ ಕಂಠಿ ಸಲಹೆ ಮಾಡಿದರು. ಅತಿಥಿಗಳಾಗಿದ್ದ ಜಗನ್ನಾಥರಾವ್ ಜೋಶಿ ಪರಿವಾರದ ಪ್ರಮುಖರಾದ ಮೀನಾಜಿ ಜೋರಾಪೂರ ಮಾತನಾಡಿ ಯೋಗವು ನಮ್ಮ ಸನಾತನ ಸಂಪ್ರದಾಯದ ವಿದ್ಯೆಯಾಗುವುದರ ಜತೆಗೆ ಸರ್ವ ರೋಗಕ್ಕೂ ಮದ್ದಿನಂತಿದೆ. ಆದ್ದರಿಂದ ಎಲ್ಲದಕ್ಕೂ ಆಸ್ಪತ್ರೆಗೆ ಹೋಗುವ ಬದಲಿ ನಿತ್ಯ ಯೋಗ ಅಭ್ಯಾಸ ಮಾಡುವಂತೆ ಸಲಹೆ ಮಾಡಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಎಂಜಿನಿಯರ್ ಬಿ.ಎಸ್.ಕಾಳಗಿ ಮಾತನಾಡಿದರು. ಯೋಗ ಶಿಕ್ಷಕ ಮಂಜುನಾಥ ಹೂಗಾರ ಅವರಿಂದ ಯೋಗ ತರಬೇತಿ ನಡೆಯಿತು.
ಸಮಾರಂಭದಲ್ಲಿ ಕೃಷ್ಣಾ ಮಹಾಲಿಮನಿ ಸೇರಿದಂತೆ ಜಗನ್ನಾಥರಾವ್ ಜೋಶಿ ಪ್ರತಿಷ್ಠಾನದ ಸದಸ್ಯರು, ಬಸವೇಶ್ವರ ವಿದ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.
ರಾಜು ಆಲದಕಟ್ಟಿ ವೈಯಕ್ತಿಕ ಗೀತೆ ಹಾಡಿದರು. ಎಫ್.ವಿ.ಶಿರುಂದಮಠ ಸ್ವಾಗತಿಸಿದರು. ಡಾ.ವೇಣುಗೋಪಾಲ ಸುಬೇದಾರ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.