ಮುಂಡರಗಿ: ಪಟ್ಟಣದ ಕನಕಪ್ಪನಗುಡ್ಡದ ಮೇಲಿರುವ ಲಕ್ಷ್ಮೀ ಕನಕನರಸಿಂಹನ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ದಲಿತ ಕೇರಿಯ ಜನರು ಮಂಗಳವಾರ ಬೆಳಗಿನ ಜಾವ ಲಕ್ಷ್ಮೀಕನಕನರಸಿಂಹನಿಗೆ ಬೃಹತ್ ಪಾದ
ರಕ್ಷೆಗಳ ಸಮೇತ ದೇವರಿಗೆ ಗರುಡಾರುತಿ ಕೊಂಡೊಯ್ದರು.
ಪಟ್ಟಣದ ಲಕ್ಷ್ಮೀಕನಕನರಸಿಂಹ ಜಾತ್ರೆಯಲ್ಲಿ ಪಟ್ಟಣದ ಎಲ್ಲ ಜಾತಿಯ ಜನ ಮುಕ್ತವಾಗಿ ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಮಹಾರಥೋತ್ಸವದ ಪ್ರಯುಕ್ತ ಬೆಳಿಗ್ಗೆ ಪಟ್ಟಣದ ದಲಿತರು ಕೈಗೊಳ್ಳುವ ಗರುಡಾರುತಿಗೆ ತುಂಬಾ ವಿಶಿಷ್ಟ ಸ್ಥಾನಮಾನವಿದೆ. ದಲಿತ ಕೇರಿಯ ಜನ ಒಂದಾಗಿ ಅದ್ಧೂರಿ ಮೆರವಣಿಗೆ ಮೂಲಕ ಲಕ್ಷ್ಮಿಕನಕನರಸಿಂಹನಿಗೆ ಪ್ರತಿವರ್ಷ ಗರುಡಾರುತಿಯೊಂದಿಗೆ ಬೃಹತ್ ಪಾದರಕ್ಷೆಗಳನ್ನು ಸಮರ್ಪಿಸುತ್ತಾರೆ.
ಪಟ್ಟಣದ ದಲಿತರೆಲ್ಲ ಶುಚಿರ್ಭೂತರಾಗಿ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿಕನಕ ನರಸಿಂಹನಿಗೆ ಮೊದಲು ಪೂಜೆ ಸಲ್ಲಿಸಿ ಸುಮಾರು 3 ಫೂಟ್ ಉದ್ದದ ಪಾದರಕ್ಷೆಗಳನ್ನು ಸಮರ್ಪಿಸುತ್ತಾರೆ. ನಂತರ ಅವುಗಳನ್ನು ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿರುವ ಪುಟ್ಟ ಕೊಠಡಿಯಲ್ಲಿ ಇಡುತ್ತಾರೆ.
ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಅವುಗಳಿಂದ ಹೊಡೆದುಕೊಳ್ಳುತ್ತಾರೆ. ದೇವರ ಪಾದರಕ್ಷೆಗಳಿಂದ ಹೊಡೆದುಕೊಂಡರೆ ದೇಹದಲ್ಲಿರುವ ಅನಿಷ್ಟ, ಪೀಡೆ ದೂರವಾಗುತ್ತವೆ ಎಂಬ ಪ್ರತೀತಿ ಇದೆ.
ಗೌರಮ್ಮ ಹಿರೇಮನಿ, ಲಕ್ಷ್ಮಣ ತಗಡಿಮನಿ, ಗೋವಿಂದಪ್ಪ ದೊಡ್ಡಮನಿ, ಸಂತೋಷ ಹಿರೇಮನಿ, ಮೈಲಪ್ಪ ದೊಡ್ಡಮನಿ, ಗಣದಪ್ಪ ಹಾಲಿನವರ, ನಿಂಗಪ್ಪ ಮಾಯಮ್ಮನವರ, ಮಹಾದೇವಪ್ಪ ತಾಂಮ್ರಗುಂಡಿ, ಮಹಾಲಿಂಗಪ್ಪ ನೀರಲಗಿ, ಗಿರೀಶ ಹಿರೇಮನಿ, ಮಾಯಪ್ಪ ದೊಡಗಡಮನಿ, ಹನುಮಂತ ಅಣ್ಣಿಗೇರಿ, ಫಕೀರೇಶ ಬ್ಯಾಳವಾಡಗಿ, ಗೌರಮ್ಮ ತಾಮ್ರಗುಂಡಿ ಆಚರಣೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.