ಗದಗ: ನಗರದ ಜೆಸಿ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿ ಗಳಿಂದ ಡೊನೇಷನ್ ಹಾಗೂ ಶುಲ್ಕ ತೆಗೆದು ಕೊಳ್ಳುತ್ತಿದೆ ಎಂದು ಆರೋಪಿಸಿ ಶುಕ್ರವಾರ ನಗರದಲ್ಲಿ ಪೋಷಕರು ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ ಶಾಲೆಯ ಆಡಳಿತ ಮಂಡಳಿ ಸರ್ಕಾರದ ಆದೇಶದ ವಿರುದ್ಧವಾಗಿ ವಿದ್ಯಾರ್ಥಿಗಳಿಂದ ಡೊನೇಷನ್ ಹಾಗೂ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಪಾಲಕರು ತೀವ್ರವಾಗಿ ಖಂಡಿಸಿ ಮುಳಗುಂದ ನಾಕಾ ಬಳಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
ಕೆಲ ದಿನಗಳ ಹಿಂದಷ್ಟೇ ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಾಲೆಗೆ ಭೇಟಿ ನೀಡಿ, ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಳ ಮಾಡಿರುವ ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು.
ಸರ್ಕಾರದ ಆದೇಶ ಹಾಗೂ ಆಡಳಿತ ಮಂಡಳಿಯ ಸರ್ವಾಧಿಕಾರಿ ಧೋರಣೆ ಮಧ್ಯೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಕೂಡಲೇ ಶಿಕ್ಷಣ ಇಲಾಖೆ ಮಧ್ಯೆ ಪ್ರವೇಶಿಸಿ ಗೊಂದಲ ನಿವಾರಣೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕೆಂದು ಪಾಲಕರು ಒತ್ತಾಯಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಬೇಡಿಕೆ ಈಡೇರಿಸುವ ಮನವಿ ಪತ್ರ ಅರ್ಪಿಸಿದರು. ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಚಂದ್ರು ಚೌವ್ಹಾಣ, ಎಸ್.ಎಸ್.ಕೆ ಸಮಾಜದ ಅಧ್ಯಕ್ಷ ಮೆರವಾಡೆ, ಎಸ್.ಎಮ್.ಪಟ್ಟಣ್ಣಶೆಟ್ಟಿ, ಎಸ್.ಎಸ್. ವಿಜಯರಡ್ಡಿ, ಎಸ್.ಎಸ್.ಕೊಪ್ಪಳ, ಎಮ್.ಎಚ್. ಕೊರವರ, ವಿ.ಎಮ್.ಮಾಳವಳಕರ, ಎ.ಐ.ದೊಡ್ಡ ಮನಿ ಹಾಗೂ ಪಾಲಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.