ADVERTISEMENT

ಸಂಚಾರಿ ಕುರಿಗಾರರ ಅಬ್ಬರ ಜೋರು!

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:29 IST
Last Updated 7 ಡಿಸೆಂಬರ್ 2013, 8:29 IST

ಗಜೇಂದ್ರಗಡ: ಮುಂದೆ ಕುರಿ ಹಿಂಡು, ಹಿಂದೆ ಊಟದ ಸಾಮಗ್ರಿಗಳ ಜೋಳಿಗೆ ಹೊತ್ತ ಯಜಮಾನರು.. ಮುಂಜಾನೆ ಒಂದು ಹೊಲ.. ಮಧ್ಯಾಹ್ನ ಮತ್ತೊಂದು ಹೊಲ ಸಂಜೆ ಮಗದೊಂದು.

ಹಗಲು–ರಾತ್ರಿ, ಗಾಳಿ–ಬಿಸಿಲು–ಚಳಿಯನ್ನದೆ ಊರೂರು ಅಲೆಯುತ್ತ ಕುರಿಗಳ ಜತೆಗೆ ತುತ್ತಿನ ಚೀಲ ತುಂಬಿಸಿ­ಕೊಳ್ಳುವುದೇ ಇವರ ನಿತ್ಯದ ಕಾಯಕ. ಇದು ಸಂಚಾರಿ ಕುರಿಗಾರರ ಬದುಕಿನ ಚಿತ್ರಣ.

ಸದ್ಯ ರೋಣ ತಾಲ್ಲೂಕಿನಾದ್ಯಂತ ಸಂಚಾರಿ ಕುರಿಗಾರರ ಅಬ್ಬರ ಜೋರಾ­ಗಿದೆ. ಸಾಲು–ಸಾಲು ಕುರಿಗಳ ಹಿಂಡು ನಾ ಮುಂದು..ತಾ ಮುಂದು ಎಂದು ತುತ್ತಿನ ಚೀಲ ತುಂಬಿಸಿಕೊಳ್ಳಲು ಹವಣಿ­ಸುತ್ತಿದ್ದರೆ, ಕುರಿಗಾರರು ಕುರಿಗಳನ್ನು ಕಾಯುವ ತವಕದಲ್ಲಿರುತ್ತಾರೆ.

ರಾಜ್ಯದ ಬೆಳಗಾವಿ, ನಿಪ್ಪಾಣಿ, ಚಿಕ್ಕೋಡಿ, ಬೈಲಹೊಂಗಲ, ವಿಜಾಪುರ, ಬಾಗಲಕೋಟ, ಕೊಪ್ಪಳ, ಹಾವೇರಿ ಮುಂತಾದ ಜಿಲ್ಲೆಗಳ ಕುರಿಗಾರರು ಕುಟುಂಬ ಸಮೇತ ಕುರಿ ಹಿಂಡುಗಳೊಂದಿಗೆ ತಾಲ್ಲೂಕಿನ ಜಮೀನು, ತೋಟ, ಗದ್ದೆಗಳಲ್ಲಿ ಬಿಡಾರ್‌ ಹೂಡಿವೆ.

ಕಳೆದ ಮೂರು ವರ್ಷಗಳಿಂದ ತಲೆದೋರಿದ್ದ ಭೀಕರ ಬರದಿಂದ ತತ್ತರಿಸಿ ಹೋಗಿದ್ದ ಕೃಷಿಕ ಸಮೂಹಕ್ಕೆ ಪ್ರಸಕ್ತ ವರ್ಷ ಉತ್ತಮ ಮಳೆ ಆಗಿದ್ದು,  ಉಡುಗಿ ಹೋಗಿದ್ದ ಭರವಸೆಗಳನ್ನು ಇಮ್ಮಡಿಗೊಳಿಸಿವೆ. ಹೀಗಾಗಿ ಅತ್ಯಂತ ಉತ್ಸುಕತೆಯಿಂದ ಕೃಷಿ ಚಟುವಟಿಕೆ­ಗಳಲ್ಲಿ ತೊಡಗಿರುವ ಕೃಷಿಕರು ಜಮೀನುಗಳ ಫಲವತ್ತತೆ ಹೆಚ್ಚಿಸಿ­ಕೊಳ್ಳಲು ಕೊಟ್ಟಿಗೆ ಗೊಬ್ಬರ, ಎರೆ ಹುಳು ಗೊಬ್ಬರ, ಕುರಿಗಳನ್ನು ನಿಲ್ಲಿಸುವುದು ಇತ್ಯಾದಿ ಪ್ರಕ್ರಿಯೆಗಳಲ್ಲಿ ತೊಡಗುವ ಉತ್ಸಾಹದಲ್ಲಿದ್ದಾರೆ.

ಪ್ರಸಕ್ತ ವರ್ಷದ ಸಮರ್ಪಕ ಮಳೆ ಯಿಂದ ಕೃಷಿ ಚಟುವಟಿಕೆಗಳಿಗೆ ರೆಕ್ಕೆ–ಪುಕ್ಕೆಗಳು ಬಂದಿವೆ. ಜಮೀನು­ಗಳಲ್ಲಿನ ಫಸಲು ಪಡೆದುಕೊಂಡ ಕೆಲವು ಮಸಾರಿ ಪ್ರದೇಶದ ಕೃಷಿಕರು ಜಮೀನುಗಳ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿರುವ ಕೃಷಿಕರು ದುಬಾರಿ ಮೊತ್ತದ ಕೊಟ್ಟಿಗೆ ಗೊಬ್ಬರ ತುಂಬಿ ಸುತ್ತಿದ್ದಾರೆ. ಇದು ಸಾಲದೆಂಬಂತೆ ಜಮೀನುಗಳಲ್ಲಿ ಕುರಿ ಗಳನ್ನು ನಿಲ್ಲಿಸಿದರೆ ಕೊಟ್ಟಿಗೆ ಗೊಬ್ಬರ ಕ್ಕಿಂತಲೂ ಉತ್ಮವಾಗಿ ಭೂಮಿ ಹದ ವಾಗುತ್ತದೆ ಎಂಬ ಕಾರಣದಿಂದ ರೈತರು ಹೊಲಗಳಲ್ಲಿ ಕುರಿ ಹಿಂಡುಗಳನ್ನು ನಿಲ್ಲಿಸಲು  ಕೃಷಿಕರು ಪೈಪೋಟಿ ನಡೆಸಿದ್ದಾರೆ.

ಕುರಿ ಸಂಖ್ಯೆಗೆ ಅನುಗುಣವಾಗಿ  ರೈತರ ಜಮೀನುಗಳಲ್ಲಿ ಬೇಡಿಕೆಯಂತೆ ಕನಿಷ್ಠ ಎಂಟು ದಿನಗಳಿಂದ ತಿಂಗಳು ಗಟ್ಟಲೆ ಬಿಡಾರ್‌ ಹೂಡುವ ಕುರಿ­ಗಾರರು ಕುರಿಗಳ ಸಂಖ್ಯೆಗೆ ಅನು­ಗುಣ ವಾಗಿ ದರ ನಿಗದಿ ಪಡಿಸಿರುತ್ತಾರೆ. ‘ಕುರಿ ಗಳನ್ನು ನಮ್ಮ ಮಕ್ಕಳಿಗಿಂತಲೂ ಹೆಚ್ಚು ಕಾಳಜಿ ಮಾಡ್ತೀವ್ರೀ ಕುರಿಗಳು ನಮ್ಮ ಕೈಗೆ ಬಂಗಾರದ ಕಡಗ ಹಾಕ­ಸತಾವ್ರೀ’ ಎಂದು ಕುರಿಗಾರ ಹನುಮಪ್ಪ ಕಡ್ಲಿ ಕೊಪ್ಪ, ಯಮನಪ್ಪ ಜಂತಗುಂಟಿ ‘ಪ್ರಜಾವಾಣಿ’ಗೆ ವಿವರಿಸಿದರು.

‘ಕುರಿ ಸಾಕಿ ಕುಬೇರನಾದ’ ಎಂಬ ನಾನ್ನುಡಿಯಂತೆ ಕೇವಲ ಕುರಿ ಕಾಯು­ವವರು ಎಂಬ ತಾತ್ಸಾರ ಮನೋಭಾ­­ವನೆಯಿಂದ ಕುರಿಗಾರರನ್ನು ಕಂಡರೂ ಕಠಿಣ ಪರಿಶ್ರಮದ ಬದುಕಿನ ಜೊತೆಗೆ ಲಕ್ಷಾಂತರ ವ್ಯವಹಾರ ಮಾಡುವ ಇವರು ರೈತ ಸಮೂಹಕ್ಕೆ ಅಗತ್ಯವಾಗಿ ಬೇಕಾದವರೂ ಹೌದು!.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.